ಈ ತಿಂಗಳ 13ರಂದು ಎಚ್.ಎ.ಎಲ್. ನೌಕರರೊಂದಿಗೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಸಂವಾದವು ಸಂಪೂರ್ಣ ಏಕಪಕ್ಷೀಯ, ನಿರರ್ಥಕ ಮತ್ತು ಪಕ್ಕಾ ಚುನಾವಣಾ ರಾಜಕೀಯ ಕಾರ್ಯಕ್ರಮ. ‘ಎಚ್.ಎ.ಎಲ್. ದುಃಸ್ಥಿತಿಗೆ ಈಗಿನ ಸರ್ಕಾರವೇ ಕಾರಣ’ ಎಂದು ಆಯ್ದ ಕೆಲವು ನಿವೃತ್ತ ಅಧಿಕಾರಿಗಳು ಒಂದೆಡೆ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ರಫೇಲ್ ವಿಮಾನಗಳ ಖರೀದಿಯಿಂದ ಸರ್ಕಾರವು ಎಚ್.ಎ.ಎಲ್.ನ ಸಾಮರ್ಥ್ಯ ವನ್ನು ಕಡೆಗಣಿಸಿದೆ, ಈ ಮೂಲಕ ಅದರ ಬೆನ್ನಿಗೆ ಚೂರಿ ಇರಿದಿದೆ ಎಂಬ ಹೇಳಿಕೆಯೂ ಹೊರಬಿದ್ದಿದೆ. ಈ ಹೇಳಿಕೆಗಳಲ್ಲಿ ಸತ್ಯಾಂಶ ಎಷ್ಟಿದೆ ಎಂಬುದರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರಕ್ಷಣಾ ಸಾಮಗ್ರಿಗಳ ಬಗ್ಗೆ ಪರಿಣತಿ ಹೊಂದಿರುವವರ ಜತೆ ಚರ್ಚೆಯಾಗಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಪ್ರಶ್ನೆಯೂ ಅವರದೇ ಉತ್ತರವೂ ಅವರದೇ ಎನ್ನುವ ರೀತಿಯಲ್ಲಿ ತೀರ್ಮಾನಗಳು ಹೊರಬಿದ್ದವು.