ತೀವ್ರ ಆರ್ಥಿಕ ಸಂಕಷ್ಟ, ಅವಶ್ಯಕ ಸಾಮಗ್ರಿಗಳ ವಿಪರೀತ ಬೆಲೆ ಹೆಚ್ಚಳ, ಕಾಡುತ್ತಿರುವ ನಿರುದ್ಯೋಗ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳ, ಕೋವಿಡ್ ಹಾವಳಿ... ಹೀಗೆ ಅತ್ಯಂತ ತುರ್ತಿನ ನೂರಾರು ವಿಷಯಗಳು ರಾಜ್ಯವನ್ನು ದಹಿಸುತ್ತಿವೆ. ಇಂತಹ ಹೊತ್ತಲ್ಲಿ ಜನರ ಕಡು ಸಂಕಷ್ಟಗಳನ್ನು ವಿಧಾನಸಭೆ ಕಲಾಪಗಳಲ್ಲಿ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕಿತ್ತು. ಆದರದು ಲಂಪಟತೆ, ಲಜ್ಜೆಗೇಡಿ ನಡವಳಿಕೆ ಕುರಿತ ಚರ್ಚೆಯಿಂದಲೇ ಮಣ್ಣುಪಾಲಾಯ್ತು! ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಈ ಮೂಲಕ ನೀರುಪಾಲಾಯ್ತು. ಇಂತಹವರನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದಕ್ಕೆ ಮತ್ತೊಮ್ಮೆ ಸಾರ್ವಜನಿಕರು, ಅದರಲ್ಲೂ ಮಹಿಳೆಯರು ತಮ್ಮ ಬಗ್ಗೆಯೇ ನಾಚುವಂತಾಯ್ತು.
ಅಸಹ್ಯದ ಪರಮಾವಧಿ ತಲುಪಿರುವ ರಾಜಕಾರಣಕ್ಕೆ ಇದು ಇನ್ನೊಂದು ಉದಾಹರಣೆ. ಲಂಗುಲಗಾಮಿಲ್ಲದ ಲಂಪಟತೆಯ ಚರ್ಚೆಗಳು ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲದಂತಹ ಲಜ್ಜೆಗೇಡಿತನದ್ದಾಗಿರುವುದಂತೂ ಅಕ್ಷಮ್ಯ. ತಮ್ಮ ನುಡಿಮುತ್ತುಗಳನ್ನು ನಾಡ ಜನರು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ, ತಮ್ಮ ನಡೆಗೆ ಹೇಸುತ್ತಿದ್ದಾರೆಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದ, ತಮ್ಮ ನಿಜ ಕರ್ತವ್ಯ ಮರೆತ ಇಂತಹ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರವಿದೆ.
– ರೂಪ ಹಾಸನ,ಹಾಸನ,ಪ್ರೊ. ಸ.ಉಷಾ,ಶಿವಮೊಗ್ಗ,ನಂದಿನಿ ಜಯರಾಂ,ಮಂಡ್ಯ, ಶಾರದಾ ಗೋಪಾಲ,ಧಾರವಾಡ,ಸ್ವರ್ಣ ಭಟ್,ಮಂಗಳೂರು,ಡಿ.ನಾಗಲಕ್ಷ್ಮಿ,ಬಳ್ಳಾರಿ