ಕುವೆಂಪು ತಮ್ಮ ಆತ್ಮಕಥನ ‘ನೆನಪಿನ ದೋಣಿ’ಯಲ್ಲಿ ಹೇಳಿರುವಂತೆ, ಅವರ ವಂಶದ ಪೂರ್ವಿಕರು ಜೈನ ಧರ್ಮೀಯರಾಗಿದ್ದರು. ಕುಪ್ಪಳಿಯಲ್ಲಿ ಕುವೆಂಪು ಅವರ ಮನೆಯಲ್ಲಿ ಶುಕ್ರವಾರವೇ ಅಂಗಳಕ್ಕೆಲ್ಲಾ ಸೆಗಣಿ ಬಳಿದು ಸಿದ್ಧಪಡಿಸಿ, ಶನಿವಾರ ಮನೆಯ ಗಂಡಸರು, ಹೆಂಗಸರೆಲ್ಲಾ ಸ್ನಾನ ಮಾಡಿ ಕಡ್ಡಾಯವಾಗಿ ಮಡಿಯುಟ್ಟು ಶನಿವಾರವನ್ನು ಪವಿತ್ರ ದಿನದಂತೆ ಆಚರಿಸುತ್ತಿದ್ದರು. ಆ ದಿನ ಮಾಂಸ ಭಕ್ಷಣೆ, ಮಾಂಸದ ಅಡುಗೆ ಯಾವುದೂ ಇಲ್ಲ. ಮಾಂಸವನ್ನು ಮುಟ್ಟುವಂತೆಯೂ ಇರಲಿಲ್ಲ. ‘ಈ ಆಚರಣೆಯು ಹಿಂದೆ ನಮ್ಮವರೆಲ್ಲಾ ಜೈನರಾಗಿದ್ದುದರ ಅವಶೇಷವೋ ಎನೊ?’ ಎನ್ನುತ್ತಾರೆ ಕುವೆಂಪು.