ಮೈಸೂರಿನಲ್ಲಿ ಇತ್ತೀಚೆಗೆ ನಡೆದ ‘ಸಂವಿಧಾನ ಜಾಗೃತಿ’ ಸಮಾವೇಶದಲ್ಲಿ ಶಾಸಕ ಎನ್.ಮಹೇಶ್ ಅವರು ‘ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಸಾಮಾನ್ಯರಲ್ಲ. ಇವರು ಹಾಗೂ ಬಿಜೆಪಿಯವರು ದೇಶದಲ್ಲಿ ‘ಸಿವಿಲ್ ವಾರ್’ ಯೋಜಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ (ಪ್ರ.ವಾ., ಫೆ. 3). ಇದು ಆಧಾರರಹಿತ ಮತ್ತು ಹೊಣೆರಹಿತ ಹೇಳಿಕೆ. ದೇಶದಲ್ಲಿ ಆಗುತ್ತಿರುವ ಪ್ರಸಕ್ತ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡುವಾಗ ಶಾಸಕರು, ಕಾಂಗ್ರೆಸ್ ಮತ್ತು ಬಿಜೆಪಿಯ ಜೊತೆ ಕಮ್ಯುನಿಸ್ಟರನ್ನೂ ಸೇರಿಸಿ ಹೇಳಿರುವುದು ಸರಿಯಲ್ಲ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಆಡಳಿತದ ಜನವಿರೋಧಿ ನೀತಿಗಳ ವಿರುದ್ಧ ರಾಜಿ ಇಲ್ಲದೆ ಕಮ್ಯುನಿಸ್ಟರು ಹೋರಾಡುತ್ತಾ ಬಂದಿದ್ದಾರೆ.