‘ಹೊಸ ವರ್ಷದ ಮೊದಲ ದಿನ, ಬಿಬಿಎಂಪಿಯ ಬೇರೆಬೇರೆ ಆಸ್ಪತ್ರೆಗಳಲ್ಲಿ ಜನಿಸಿದ ಐದು ಹೆಣ್ಣು ಮಕ್ಕಳ ಹೆಸರಿನಲ್ಲಿ ತಲಾ ಐದು ಲಕ್ಷ ರೂಪಾಯಿ ಠೇವಣಿ ಇರಿಸಲಾಗುವುದು, ಶಿಕ್ಷಣ ಸಂದರ್ಭದಲ್ಲಿ ಇದನ್ನು ಬಳಸಬಹುದು’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ (ಪ್ರ.ವಾ., ಜ. 2).
ಸಹಜವಾಗಿ ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಅಂದು ಜನಿಸಿದ ಮಕ್ಕಳಾಗಲೀ ಆ ತಾಯಂದಿರಾಗಲೀ ಸಾಧನೆ ಏನಾದರೂ ಮಾಡಿದ್ದಾರೆಯೇ? ಮಕ್ಕಳು ಜನಿಸುವುದು ಸಹಜ ಕ್ರಿಯೆ ಅಲ್ಲವೇ? ಹೊಸ ವರ್ಷದ ಹಿಂದಿನ ದಿನ ಅಥವಾ ನಂತರದ ದಿನ ಜನಿಸಿದ ಮಕ್ಕಳು ಮಾಡಿದ ಪಾಪವಾದರೂ ಏನು? ಈ ಮಕ್ಕಳ ಹೆಸರಿನಲ್ಲಿ ತಲಾ ₹ 5 ಲಕ್ಷ ಠೇವಣಿ ಇಡುವುದನ್ನು ಬಿಟ್ಟು, ಅತ್ಯಗತ್ಯ ಹಾಗೂ ತುರ್ತಾಗಿ ಆಗಬೇಕಿರುವ ಇತರ ಕೆಲಸಗಳತ್ತ ಬಿಬಿಎಂಪಿಯವರು ಗಮನಹರಿಸಲಿ. ಅಷ್ಟಕ್ಕೂ ಹೊಸ ವರ್ಷದ ಮೊದಲ ದಿನ ಹುಟ್ಟುವುದು ಒಂದು ಸಾಧನೆ ಎಂದು ಪಾಲಿಕೆಗೆ ಅನ್ನಿಸಿದರೆ, ಅಂಥ ಮಕ್ಕಳ ಪಾಲಕರಿಗೆ ಒಂದೊಂದು ಹೂಗುಚ್ಛವನ್ನು ನೀಡಿ ಅಭಿನಂದಿಸಲಿ.