ಮುಸಲ್ಮಾನರನ್ನು ವಿರೋಧಿಯನ್ನಾಗಿಸುವ ಪ್ರತೀ ಅಂಶವೂ ಮೂಲದಲ್ಲಿ ರೈತವಿರೋಧಿಯೂ ಆಗಿದೆ. ಒಂದೆಡೆ ಜಾತೀಯತೆ, ಇನ್ನೊಂದೆಡೆ ಧರ್ಮದ ಅಂಧಕಾರ ರೈತಸಮುದಾಯವನ್ನು ಬಡವಾಗಿಸುತ್ತಿರುವುದು ಈ ಕ್ಷಣದ ಸತ್ಯ. ಕುರಿ, ಕೋಳಿ, ದನ, ಚರ್ಮ, ರೇಷ್ಮೆ, ಮಚ್ಚು, ಕೊಡಲಿ ಎಲ್ಲದರಲ್ಲೂ ರೈತ- ಮುಸ್ಲಿಮರ ಪಾಲುದಾರಿಕೆ ಸಮಾನವಾಗಿದೆ. ಪ್ರತಿಯೊಂದು ಕೃಷಿ ಉತ್ಪನ್ನದ ಮೊದಲ ಗ್ರಾಹಕರೇ ಮುಸಲ್ಮಾನರು. ಎತ್ತಿನ ಲಾಳದಿಂದ ಹಿಡಿದು ರೈತನಿಗೆ ಹೊರೆಯಾದ ಮುದಿ ಹಸುವನ್ನು ಕೊಳ್ಳುವವರು ಅವರೇ. ಭಾವನಾತ್ಮಕತೆ ಮೀರಿದ ಆರ್ಥಿಕ ಸಂಬಂಧಗಳಿಗೆ ಇವು ನಿದರ್ಶನ. ಬೆಂಗಳೂರು- ಮೈಸೂರು ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಾಗಿರುವ ಬೀಡಾಡಿ ದನಗಳೇ ಈ ಕೊಡು- ಕೊಳ್ಳು ಸಂಬಂಧದ ಮುರಿತಕ್ಕೆ ಒಂದು ಸಾಕ್ಷಿ.