ಸಾರ್ವಜನಿಕ ಹಣಕಾಸುಶಾಸ್ತ್ರದಲ್ಲಿ ಸರ್ಕಾರವೊಂದು ತನಗೆ ಅಗತ್ಯವಾದ ಸಂಪನ್ಮೂಲ ಸಂಗ್ರಹಿಸಿಕೊಳ್ಳಲು ತೆರಿಗೆಗಳು, ಸಾಲ ಎತ್ತುವುದು ಮತ್ತು ಹಣ ಮುದ್ರಿಸುವುದು ಎಂದು ಮೂರು ಮಾರ್ಗಗಳನ್ನು ನೀಡಲಾಗಿದೆ. ಅದರಲ್ಲಿ ಹಣಕಾಸು ಸಂಪನ್ಮೂಲಕ್ಕೆ ಸಾರ್ವಜನಿಕ ಆಸ್ತಿಗಳನ್ನು ಗುತ್ತಿಗೆ ನೀಡುವ, ಮಾರಾಟ ಮಾಡುವ ಬಗ್ಗೆ ಯಾವ ಚರ್ಚೆಯೂ ಇಲ್ಲ. ಇಂದು ನಮ್ಮ ಒಕ್ಕೂಟ ಸರ್ಕಾರವು ಇಂತಹ ಸಾರ್ವಜನಿಕ ಆಸ್ತಿಗಳನ್ನು, ಭೂಮಿಯನ್ನು ಮತ್ತು ಸರ್ಕಾರಿ ಉದ್ದಿಮೆಗಳನ್ನು ಗುತ್ತಿಗೆಗೆ ಖಾಸಗಿ ಬಂಡವಾಳಿಗರಿಗೆ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಲು ಹೊರಟಿದೆ. ಇದು ಸಂವಿಧಾನ ವಿರೋಧಿ ಕ್ರಮವಾಗಿದೆ. ಏಕೆಂದರೆ ಈ ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಸಂಪನ್ಮೂಲವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಕ್ರಮ ಇದರಲ್ಲಿ ಇಲ್ಲ. ಇದು ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ. ಮೇಲಾಗಿ ಈ ಆಸ್ತಿಗಳನ್ನು ಕಳೆದ ಏಳು ದಶಕಗಳಿಂದ ಪ್ರತಿಯೊಬ್ಬ ಪ್ರಜೆಯೂ ನೀಡಿರುವ ತೆರಿಗೆಯ ಬಂಡವಾಳದಿಂದ ನಿರ್ಮಾಣ ಮಾಡಲಾಗಿದೆ.