ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್ ಸುಮಾರು ₹500 ಕೋಟಿ ತೆರಿಗೆ ವಂಚಿಸಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಅ. 19). ಇದನ್ನು ಓದಿ ಒಂದು ಕ್ಷಣ ದಂಗಾದೆ. ಜನರ ಮುಗ್ಧತೆ ಮತ್ತು ಭಾವುಕತೆಯನ್ನು ಬಂಡವಾಳವನ್ನಾಗಿಸಿಕೊಂಡು ಕೋಟಿಗಟ್ಟಲೆ ಸಂಪಾದಿಸಿರುವ ಇವರಿಗೆ ಏನೆನ್ನಬೇಕೋ ತಿಳಿಯದು.
ಜನಸಾಮಾನ್ಯರು ದೈವೀ ಸ್ವರೂಪವೆಂದು ಹಾಗೂ ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವ ಶಕ್ತಿ ಎಂದು ಇವರನ್ನು ನಂಬಿದ್ದಾರೆ. ಆ ನಂಬಿಕೆಯನ್ನು ಬಳಸಿಕೊಂಡು ಮೂಟೆಗಟ್ಟಲೆ ಹಣ ಕೂಡಿಡುವ ಕೆಲಸ ಮಾಡುವುದು ಅಕ್ಷಮ್ಯ.
ಜನ ಎಲ್ಲಿಯವರೆಗೆ ಪ್ರಜ್ಞಾವಂತರಾಗುವುದಿಲ್ಲವೋ ಅಲ್ಲಿಯವರೆಗೂ ಇಂತಹವರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಹೀಗಾಗಿಯೇ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ದೇಶದಲ್ಲಿನ ಎಲ್ಲ ಸ್ವಯಂಘೋಷಿತ ದೇವಮಾನವರ ಆಸ್ತಿಪಾಸ್ತಿ ಬಗ್ಗೆ ಸರ್ಕಾರ ಸ್ವಯಂಪ್ರೇರಿತ ತನಿಖೆ ನಡೆಸಬೇಕು.