ರಾಜ್ಯದ ಹಲವು ಪ್ರದೇಶಗಳು ಪ್ರವಾಹದ ಹೊಡೆತಕ್ಕೆ ಸಿಲುಕಿ ವಿತ್ತ ಹಾನಿ, ಜೀವಹಾನಿ ಅನುಭವಿಸಿವೆ. ದಾನಿಗಳು ಹಾಗೂ ರಾಜ್ಯ ಸರ್ಕಾರ ಕೂಡಿ ಶಕ್ತಿಮೀರಿ ಶ್ರಮಿಸುತ್ತಾ ನೊಂದವರ ಕಣ್ಣೀರು ಒರೆಸುತ್ತಿದ್ದರೂ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಈ ಹಣ ಸಾಲುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳೂ ಜನರ ಕಣ್ಣೀರು ಒರೆಸಲು ಮುಂದೆ ಬರಬೇಕಾಗಿದೆ. ನಮ್ಮ ಜನರು ಭಕ್ತಿಯ ಪರಾಕಾಷ್ಠೆಯಲ್ಲಿ ದೇವಾಲಯದ ಹುಂಡಿಗಳಿಗೆ ಹಾಕುವ ಅಪಾರ ಧನರಾಶಿಯನ್ನು ಸಂತ್ರಸ್ತರಿಗಾಗಿ ಹೊಸ ಮನೆಗಳನ್ನು ಕಟ್ಟಲು, ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು, ಹಾಳಾದ ಸೇತುವೆಗಳನ್ನು ಪುನರ್ ನಿರ್ಮಿಸಲು ಬಳಸಿದರೆ ಏನೂ ಕೇಡಿಲ್ಲ. ಜನಸೇವೆಯೇ ಜನಾರ್ದನನ ಸೇವೆ ಎಂಬ ಗಾದೆ ಇದೆ. ಈಗ ಈ ಜೀವಂತ ಜನಾರ್ದನರನ್ನು ಉಳಿಸಿಕೊಳ್ಳಲು ಹುಂಡಿಯ ಹಣವನ್ನು ಬಳಸಬೇಕು.