ಈ ದಿನಗಳಲ್ಲಿ ನೀವು ಯಾರೊಡನೆಯಾದರೂ ಜಾತಿಗಳ ಮೇಲು ಕೀಳಿನ ಸಾಮಾಜಿಕ ವ್ಯವಸ್ಥೆಯಿಂದ ಭರತಖಂಡದ ಇತಿಹಾಸದ ಉದ್ದಕ್ಕೂ ಕೋಟಿಗಟ್ಟಲೆ ಜನ ಹಸಿವು, ಅಪಮಾನ ಮತ್ತು ಬಡತನದಿಂದ ನರಳುತ್ತಿರುವುದರ ಬಗ್ಗೆ ಮಾತನಾಡಲು ತೊಡಗಿದರೆ, ಮರುಗಳಿಗೆಯಲ್ಲಿಯೇ ಅವರು ‘ರೀ, ಈಗ ಜಾತಿ ಎಲ್ಲಿದೆ? ...ಪ್ರತಿಭೆ ಮತ್ತು ಪರಿಶ್ರಮ ಇದ್ದರೆ ಯಾರು ಬೇಕಾದರೂ ಮುಂದೆ ಬರಬಹುದು’ ಎನ್ನುತ್ತಾರೆ. ಆದರೆ ಕಳೆದ ವಾರ, ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆ ಬಂದಾಗ, ವಿಧಾನಸಭಾ ಸದಸ್ಯರ ಪ್ರತಿಭೆ ಮತ್ತು ಪರಿಶ್ರಮದ ಬಗ್ಗೆ ಮಾತನಾಡುವ ಬದಲು, ಮೂರು ಜಾತಿಗಳಲ್ಲಿ ಯಾವ ಜಾತಿಯವರು ಮುಖ್ಯಮಂತ್ರಿ ಆಗಬೇಕು ಎಂಬುದೇ ದೊಡ್ಡ ಸಂಗತಿಯಾಗಿತ್ತು. ಆದ್ದರಿಂದ ಇನ್ನುಳಿದ ನೂರಾರು ಬಗೆಯ ಜಾತಿ, ಉಪಜಾತಿಗಳಿಗೆ ಸೇರಿದ ವಿಧಾನಸಭಾ ಸದಸ್ಯರು ಜಾತಿಯ ಕಾರಣದಿಂದಲೇ ಅವಕಾಶ ವಂಚಿತರಾದರು.