ಕನ್ನಡ ಸಾಹಿತ್ಯ ಪರಿಷತ್ತಿನ ಉಪ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಪರಿಷತ್ತಿನ ನೂತನ ಅಧ್ಯಕ್ಷರ ಆತುರದ ನಡೆ ಪೂರ್ವಗ್ರಹಪೀಡಿತವೆಂಬುದು ಅವರ ಕಾರ್ಯಸೂಚಿಯಲ್ಲೇ ಬಯಲುಗೊಂಡಿದೆ. ಪರಿಷತ್ತು ಎಂದರೆ ಕೇವಲ ಸದಸ್ಯರಲ್ಲ. ಅದರಲ್ಲೂ ಸದಸ್ಯರನ್ನು ಅಕ್ಷರಸ್ಥರು, ಅನಕ್ಷರಸ್ಥರೆಂದು ವಿಂಗಡಿಸುವುದರ ಹಿಂದಿನ ಘನ ಉದ್ದೇಶವಾದರೂ ಏನು? ಪರಿಷತ್ತಿಗೆ ಸಾಂಸ್ಥಿಕ ನೆಲೆಗಟ್ಟು ತಂದುಕೊಟ್ಟ ಅನಕ್ಷರಸ್ಥ ಜನಪದರ ಕೊಡುಗೆ ಹಿರಿದು. ಉದ್ದೇಶಿತ ತಿದ್ದುಪಡಿಗಳು ಸದಸ್ಯರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿ ಅಧಿಕಾರ ಕೇಂದ್ರೀಕರಣಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಹೀಗಾಗಿ ಕರಡು ಪ್ರತಿಯನ್ನು ಸರ್ವಸದಸ್ಯರ ಮಹಾಸಭೆಯಲ್ಲಿ ಮಂಡಿಸಿ, ಕಾನೂನಾತ್ಮಕವಾಗಿದ್ದರೆ ಅನುಮೋದನೆ ಪಡೆದು ಮುಂದುವರಿಯಬೇಕು.