ಬಹಳಷ್ಟು ಅಧಿಕಾರಿಗಳು ತಮ್ಮ ವಾರ್ಷಿಕ ವರದಿಯನ್ನು ನಮೂದಿಸಲು ಇನ್ನೂ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ‘ನಿಮ್ಮ ಕಾರ್ಯನಿರ್ವಹಣಾ ವರದಿ ಸಲ್ಲಿಕೆಯಾಗಿಲ್ಲ. ಇದರಿಂದ ನಿಮಗೆ ಬಡ್ತಿಯಲ್ಲಿ ತೊಂದರೆಯಾಗಬಹುದು’ ಎಂಬ ಬೆದರಿಕೆ ರೂಪದ ಸಂದೇಶಗಳನ್ನು ಕೂಡ ಇ ಆಫೀಸ್ ಯೋಜನಾ ಘಟಕದಿಂದ ರವಾನಿಸಲಾಗುತ್ತಿದೆ. ಈ ಹಿಂದೆ ಎಚ್ಆರ್ಎಂಎಸ್ ವ್ಯವಸ್ಥೆಯನ್ನು ಜಾರಿಗೊಳಿಸಿದಾಗಲೂ ಇಂತಹುದೇ ಸಮಸ್ಯೆಗಳುಂಟಾಗಿದ್ದವು. ವಿಜ್ಞಾನ–ತಂತ್ರಜ್ಞಾನದ ಬಳಕೆ ಉತ್ತೇಜಿಸುವುದು, ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅಪೇಕ್ಷಣೀಯವಾದರೂ ಅತಿಯಾದ ಆತುರ ಅನಪೇಕ್ಷಣೀಯ. ಸಂಬಂಧಿಸಿದ ಉನ್ನತಾಧಿಕಾರಿಗಳು ನೌಕರರನ್ನು ಹೀಗೆ ಪರೋಕ್ಷವಾಗಿ ಹಿಂಸಿಸುವ ಬದಲು, ಜಾಲತಾಣವು ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ನೋಡಿಕೊಂಡಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.
-ಚಂದ್ರಕಾಂತ್,ಶಿವಮೊಗ್ಗ