‘ಲಂಚ ಕೊಡುವುದನ್ನು ನಿಲ್ಲಿಸಿ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರು ಜನರಿಗೆ ಸಲಹೆ ನೀಡಿದ್ದಾರೆ (ಪ್ರ.ವಾ., ನ. 30).
ಸರಿಯಾದ ಸಲಹೆಯೇ. ಆದರೆ, ಲಂಚ ಕೊಡಲೇಬೇಕು ಎಂಬ ಆಸೆ ಯಾವ ಪ್ರಜೆಗೂ ಇರುವುದಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಅರಿಯಬೇಕು. ಎಲ್ಲ ದಾಖಲೆಗಳು ಸರಿಯಿದ್ದರೂ ಸಾಮಾನ್ಯ ಪ್ರಜೆಯೊಬ್ಬ ಸರ್ಕಾರಿ ಕಚೇರಿಯಿಂದ ತನ್ನ ಕೆಲಸ ಮಾಡಿಸಿಕೊಳ್ಳಲು ತಿಂಗಳುಗಟ್ಟಲೆ ಅಲೆಯಬೇಕಾಗುತ್ತದೆ.
ಜಿಲ್ಲಾಧಿಕಾರಿಯೇ ವೇಷ ಮರೆಸಿಕೊಂಡು ಯಾವುದಾದರೂ ಸರ್ಕಾರಿ ಕಚೇರಿಗೆ ಹೋಗಿ ಲಂಚ ನೀಡದೆ ಕೆಲಸ ಮಾಡಿಸಲು ಪ್ರಯತ್ನಿಸಿದರೆ ಜನರ ಪಾಡು ಏನೆಂಬುದು ಅವರಿಗೆ ಅರ್ಥವಾದೀತು. ಹಾಗೆಂದು ಲಂಚ ನೀಡಿಯೇ ಎಲ್ಲ ಕೆಲಸಗಳನ್ನೂ ಮಾಡಿಸಬೇಕೆಂದಿಲ್ಲ. ಈ ಅಕ್ರಮವನ್ನು ಬೇರುಸಹಿತ ಕಿತ್ತೆಸೆಯಲುಎಲ್ಲರೂ ಪ್ರಯತ್ನಿಸಬೇಕು. ಆದರೆ ಲಂಚ ನೀಡುವವನೇ ಈ ಅಕ್ರಮಕ್ಕೆ ಕಾರಣ ಎಂಬಂತೆ ಆಗಬಾರದು ಅಷ್ಟೇ.