ಉಪಚುನಾವಣೆಯಲ್ಲಿ ಗೆದ್ದ ಶಾಸಕರು ನಿರ್ದಿಷ್ಟ ಖಾತೆಗಾಗಿ ಪಟ್ಟು ಹಿಡಿದಿರುವುದರಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ತೊಡಕಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಜ. 16). ಬಿಜೆಪಿಯ ತತ್ವ–ಸಿದ್ಧಾಂತಕ್ಕೆ ನಿಷ್ಠೆಯಿಂದ ಅಲ್ಲದೆ, ಅಧಿಕಾರದ ಮಹದಾಸೆ ಹೊತ್ತ ವಲಸಿಗರಾಗಿ ಬಂದವರು ತಮ್ಮ ಮೇಲೆ ಹೀಗೆ ಸವಾರಿ ಮಾಡಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕನಸು ಮನಸಿನಲ್ಲೂ ಯೋಚಿಸಿರಲಾರರು. ಇಂದಿನ ರಾಜಕೀಯದಲ್ಲಿ ಮಂತ್ರಿಯಾಗಲು ಅರ್ಹತೆ ಮತ್ತು ನಿರ್ದಿಷ್ಟ ಖಾತೆ ನಿರ್ವಹಿಸಲು ತಕ್ಕ ಅನುಭವವು ಮಾನದಂಡಗಳೇ ಅಲ್ಲ! ಹೀಗಿರುವಾಗ, ರಾಜಕೀಯದಲ್ಲಿ ಪಳಗಿರುವ ಯಡಿಯೂರಪ್ಪನವರಿಗೆ ಮಂತ್ರಿಮಂಡಲ ವಿಸ್ತರಿಸಲು ಸಾಧ್ಯವಾಗದಿರುವುದು ಸೋಜಿಗ ಏನಲ್ಲ. ಇದು ಸ್ವಯಂಕೃತ.