‘ಮೇಲ್ಜಾತಿ ಮೀಸಲು ಮಸೂದೆ’ಯು ಒಂದೆರಡು ವಾರಗಳೊಳಗೇ ಕಾಯ್ದೆಯ ಸ್ಥಾನಮಾನ ಪಡೆದಿದೆ. ಸಂಸತ್ತಿನ ಈ ನಿರ್ಣಯವನ್ನು ನಾವು ಗೌರವಿಸಲೇಬೇಕು. ಆದರೆ, ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಯೋಚಿಸುವಾಗ, ದೇಶದ ಸಂವಿಧಾನವು ಕೆಳ ವರ್ಗದ ಶೋಷಿತರನ್ನು ಮೇಲೆತ್ತಿ ಅವರನ್ನು ಮೇಲ್ಜಾತಿಯವರ ಸಾಮಾಜಿಕ ಸ್ಥಾನಮಾನಕ್ಕೆ ಸರಿದೂಗಿಸಬೇಕೆಂದು ಅಪೇಕ್ಷಿಸಿರುವುದು ತಿಳಿದುಬರುತ್ತದೆ. ಈ ಉದ್ದೇಶಕ್ಕಾಗಿಯೇ ಹಲವು ಸರ್ಕಾರಗಳು ವಿವಿಧ ಹಂತದಲ್ಲಿ ಮೀಸಲು ಸೌಲಭ್ಯ ನಿಗದಿಪಡಿಸಿ, ಶೋಷಿತರು ಮುಖ್ಯವಾಹಿನಿಯ ಜೊತೆ ಪ್ರವಹಿಸಲು ಅನುವು ಮಾಡಿಕೊಡುತ್ತಾ ಬಂದಿವೆ. ಇಂತಹ ಸೌಲಭ್ಯಗಳಿಂದ ಅವರಲ್ಲಿ ಸ್ವಾಭಿಮಾನದಿಂದ ಬಾಳುವ ಆತ್ಮವಿಶ್ವಾಸ ವೃದ್ಧಿಯಾಗಿದೆ.