ನಮ್ಮ ನೆರೆಯ ದೇಶ ಪಾಕಿಸ್ತಾನದ ಬಗ್ಗೆ ಇದೇ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 2018ರ ಆ.18ರಂದು ವರದಿ ನೀಡಿ ‘...ಪಾಕಿಸ್ತಾನವು ತನ್ನ ಪರಿಶುದ್ಧತೆಯ ಗೀಳಿನಲ್ಲಿ, ತಮ್ಮವರೇ ಆದ ಮುಸ್ಲಿಂ ಅಲ್ಪಸಂಖ್ಯಾತ ಶಿಯಾಗಳು, ಅಹಮದೀಯರು, ಅಜಾರಾಗಳು ಮತ್ತು ಇಸ್ಮಿಲಿಯಾಗಳ ವಿರುದ್ಧ ವ್ಯವಸ್ಥಿತ ದೌರ್ಜನ್ಯ ಎಸಗಿದ ಕಾರಣ, ಅವರೆಲ್ಲಾ ಈಗ ಎರಡನೇ ದರ್ಜೆ ಪ್ರಜೆಗಳಾಗಿ ಮಾರ್ಪಾಟಾಗಿದ್ದಾರೆ’ ಎಂದು ಹೇಳಿದೆ. ಅಂದರೆ ಪಾಕಿಸ್ತಾನದಲ್ಲಿ ಮುಸ್ಲಿಂ ವಿಭಾಗದವರ ಮೇಲೂ ದೌರ್ಜನ್ಯ ನಡೆಯುತ್ತಿದೆ. ನಮ್ಮ ಸರ್ಕಾರವೇ ಇಂತಹ ಒಂದು ವರದಿಯನ್ನು ವಿಶ್ವಸಂಸ್ಥೆಗೆ ಕಳುಹಿಸಿರುವಾಗ, ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವ ಮುಸ್ಲಿಮರು ಭಾರತದ ಪೌರತ್ವ ಬಯಸಿ ಬಂದರೆ ಸರ್ಕಾರ ಅದನ್ನು ನೀಡಲು ಬದ್ಧವಾಗಿ ಇರಬೇಕಲ್ಲವೇ? ಹಾಗಾದರೆ ಸಿಎಎನಲ್ಲಿ ಮುಸ್ಲಿಮರನ್ನೇಕೆ ಹೊರತುಪಡಿಸಲಾಗಿದೆ? ಎಲ್ಲ ಧರ್ಮ, ಜಾತಿ, ಭಾಷೆ, ಲಿಂಗ, ಜನಾಂಗ ಯಾರಿಗೂ ತಾರತಮ್ಯ ಮಾಡದೆ ಸಮಾನ ಅವಕಾಶಗಳನ್ನು ನೀಡಲಾಗುವುದು ಎಂಬ ಭಾರತ ಸಂವಿಧಾನದ ಮೂಲ ಆಶಯಕ್ಕೇ ಈ ಕಾಯ್ದೆ ಧಕ್ಕೆ ತಂದಂತಲ್ಲವೇ?