ತಿರುಪತಿ ಮತ್ತು ವೆಂಕಟರಮಣರ ಚರಿತ್ರೆಯು ವಿಷ್ಣು, ಪದ್ಮಾ, ಸ್ಕಂದ ಹಾಗೂ ಭಾಗವತ ಪುರಾಣಗಳಲ್ಲಿ ಪ್ರಸ್ತಾಪ ವಾಗಿರಬೇಕು. ಸತ್ಯವತಿ ಸುತ ವೇದವ್ಯಾಸರು ರಚಿಸಿದ ಭಾಗವತಾದಿ ಹದಿನೆಂಟು ಪುರಾಣಗಳ ಕಾಲವು ವಾಲ್ಮೀಕಿ ರಾಮಾಯಣ ಕಾವ್ಯದ ರಚನೆಯ ಕಾಲಕ್ಕಿಂತ ತದನಂತರದ್ದು ಎಂಬುದು ನಿರ್ವಿವಾದ! ವ್ಯಾಸರ ಪುರಾಣಗಳಲ್ಲಿ ಉಕ್ತವಾಗಿರುವ ಅದೆಷ್ಟೋ ಪುರಾಣ ಪ್ರಸಂಗಗಳು ರಾಮಾಯಣ ಕಾವ್ಯದಲ್ಲಿ ಪ್ರಸ್ತಾಪವಾಗಿವೆ. ಇಕ್ಷ್ವಾಕು ವಂಶ, ಸಗರ, ರಘು, ದಿಲೀಪ, ಭಗೀರಥ, ರಾಮ, ಪರಶುರಾಮ, ಗಂಗಾವತರಣ, ಶಿವಧನುಸ್ಸು ಇತ್ಯಾದಿ ವಿವರಗಳು ರಾಮಾಯಣದ ಪ್ರಾಚೀನತೆಗೆ ಸಾಕ್ಷಿಯೆನಿಸಿವೆ. ಇದಕ್ಕಿಂತ ಮಹತ್ವದ್ದೆಂದರೆ ರಾಮ ಭಕ್ತ, ಚಿರಂಜೀವಿ, ಮುಂದಿನ ಬ್ರಹ್ಮ ಪದವಿ ಪಡೆಯುವ, ಹನುಮ-ಭೀಮ-ಮುನಿ ಮೂರೂ ಅವತಾರಿಯಾಗಿ ಯುಗ ಯುಗಗಳಿಂದ ಸಾಗಿ ಬಂದು ಇಂದಿಗೂ ಪ್ರಾಣದೇವರೆಂದು ಪೂಜ್ಯನಾದ ಆಂಜನೇಯನನ್ನು ಸೃಷ್ಟಿಸಿದ ರಾಮಾಯಣ ಕಾವ್ಯ ಮತ್ತು ವಾಲ್ಮೀಕಿ ಪೂಜನೀಯರು.