ಹಿರಿಯ ಲೇಖಕ ಕೆ.ಟಿ. ಗಟ್ಟಿಯವರ ಶಿಕ್ಷಣ ಮಾಧ್ಯಮದ ಕುರಿತ ಲೇಖನದಲ್ಲಿ (ಪ್ರ.ವಾ., ಜೂನ್ 11) ಪ್ರಸ್ತಾಪಿಸಿರುವ ವಿಚಾರ ಸಮಯೋಚಿತವಾಗಿದೆ. ಒಂದಷ್ಟು ಇಂಗ್ಲಿಷ್ ಮಾತನಾಡುವುದು ಮತ್ತು ನೌಕರಿ ಗಳಿಸುವುದಷ್ಟೆ ಶಿಕ್ಷಣದ ಗುರಿಯಾದರೆ ಅಂತಹ ಶಿಕ್ಷಣಕ್ಕೆ ಅರ್ಥವೇ ಇರುವುದಿಲ್ಲ. ಸಚ್ಚರಿತನಾಗಿ ಬದುಕಲು ಕಲಿಸಿಕೊಡುವುದು ಶಿಕ್ಷಣದ ಮಹತ್ತರ ಗುರಿಯಾಗಬೇಕು ಎಂಬುದು ಅರ್ಥಪೂರ್ಣ ಮಾತು.
ಇವತ್ತಿನ ಶಿಕ್ಷಣದಲ್ಲಿ ಇಂಗ್ಲಿಷಿನ ವ್ಯಾಮೋಹದೆದುರು ಉಳಿದ ಸಂಗತಿಗಳು ಗೌಣವಾಗುತ್ತಿವೆ. ಜಗತ್ತಿನ ಎಲ್ಲಾ ವಿಷಯಗಳಿಗೆ ನಮ್ಮನ್ನು ತೆರೆದುಕೊಳ್ಳುವಷ್ಟು ಇಂಗ್ಲಿಷನ್ನು ಕಲಿಯುವುದು ತಪ್ಪಲ್ಲ. ಆದರೆ ಅದೇ ಸಂಪೂರ್ಣವಾಗಿ ನಮ್ಮನ್ನು ಆವರಿಸಿಕೊಳ್ಳಬಾರದು. ನಾವು ಮಾತನಾಡುವ ಮುನ್ನ ಯೋಚಿಸುತ್ತೇವೆ. ಈ ಯೋಚಿಸುವ ಭಾಷೆ ಯಾವಾಗಲೂ ಮಾತೃಭಾಷೆಯೇ ಆಗಿರುತ್ತದೆ. ನಮಗೆ ಕನಸುಗಳು ಬೀಳುವುದು ಮಾತೃಭಾಷೆಯಲ್ಲಿ ಮಾತ್ರ. ಯೋಚಿಸುವ ಮತ್ತು ಕನಸುಗಳು ಬೀಳುವ ಭಾಷೆ ಶಿಕ್ಷಣ ಮಾಧ್ಯಮವಾದರೆ ಮಾತ್ರ ವಿದ್ಯಾರ್ಥಿಯ ಸಂಪೂರ್ಣ ವಿಕಸನ ಸಹಜವೂ ಪರಿಪೂರ್ಣವೂ ಆಗುತ್ತದೆ. ಇಂಗ್ಲಿಷ್ ಕಲಿಯುವುದರ ಜೊತೆಗೆ ಮಾತೃಭಾಷೆಯಾದ ಕನ್ನಡಕ್ಕೆ ಹೆಚ್ಚು ಒತ್ತು ನೀಡುವುದು ಒಳ್ಳೆಯದು.