ರಾಮನಗರ: ‘ಕೇವಲ ದೇಹದ ಆರೋಗ್ಯ ಕಾಪಾಡಿಕೊಂಡರೆ ಸಾಲದು. ಸಮಾಜದ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಇದು ಪ್ರತಿಯೊಬ್ಬ ಪ್ರಜೆ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜನರು ಮತ್ತು ಜನಪ್ರತಿನಿಧಿಗಳು ಮುಂದಿನ ಪೀಳಿಗೆಗೆ ಆದರ್ಶವಾಗಿರಬೇಕು ಎಂಬುದು ನನ್ನ ಭಾವನೆ. ಉಳಿದಂತೆ ನಾನೇನು ಪ್ರತಿಕ್ರಿಯಿಸುವುದಿಲ್ಲ’ ಎಂದರು.
ನಗರದ ಎಂ.ಜಿ. ರಸ್ತೆಗೆ ಭೇಟಿ ನೀಡಿದ ಮಂಜುನಾಥ್ ಅವರು, ಆರ್ಯ ವೈಶ್ಯ ಸಭಾ ವತಿಯಿಂದ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಪ್ರತಿಷ್ಠಾಪಿಸಿರುವ ದೇವರ 13 ಅಡಿ ಎತ್ತರದ ಮೂರ್ತಿ ಮತ್ತು ಅಯೋಧ್ಯೆಯ ಬಾಲ ರಾಮನ ತ್ರದೂಪಿ ಪ್ರತಿಮೆ ದರ್ಶನ ಪಡೆದರು.