ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷರದೇ ಪಾರುಪತ್ಯ ಇದೆ ಎಂದು ಡಾ.ಎಚ್.ಎಸ್. ಅನುಪಮಾ (ಸಂಗತ ಜ.2) ಬರೆದಿರುವುದು ನಿಜ. ಆದರೆ ಅದಕ್ಕೆ ಕಾರಣಗಳಿವೆ. ಹಿಂದೆ ಮಹಿಳೆ, ಕಸಾಪ ಸದಸ್ಯರಾಗುವುದೇ ಕಷ್ಟವಿತ್ತು. ಈಗ ಕಾಲ ಬದಲಾಗಿದೆ. ಕಸಾಪದಲ್ಲಿ ಸಾಕಷ್ಟು ಮಹಿಳೆಯರು ಸದಸ್ಯತ್ವ ಪಡೆಯುತ್ತಿದ್ದಾರೆ.
ಕಸಾಪ ಈವರೆಗೆ ೨೪ ಅಧ್ಯಕ್ಷರನ್ನು ನೋಡಿದೆ. ಆದರೆ ಕಸಾಪ ಹುಟ್ಟಿದಂದಿನಿಂದ ಇಂದಿನವರೆಗೂ ಅದೆಷ್ಟು ಮಹಿಳೆಯರು ಕಸಾಪ ಸದಸ್ಯತ್ವವನ್ನು ಪಡೆದಿದ್ದರು? ಯಾವುದೇ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಬೇಕಾದರೆ ಮೊದಲು ಆ ಸಂಸ್ಥೆಯ ಸದಸ್ಯತ್ವ ಪಡೆದುಕೊಳ್ಳಬೇಕು.
ಈವರೆಗೆ ನಾಲ್ವರು ಮಹಿಳೆಯರು ಮಾತ್ರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಏನು ಮಾಡುವುದು? ಕಸಾಪ ನಿಬಂಧನೆಯಲ್ಲಿ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡುವಾಗ ಮಹಿಳೆಗೆ ಮೀಸಲಾತಿ ನಿಗದಿಯಾಗಿಲ್ಲ. ಇದಕ್ಕೆ ಕಸಾಪ ನಿಬಂಧನೆ ತಿದ್ದುಪಡಿಯಾಗಬೇಕು.
ಕಳೆದ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಜರುಗಿದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ೩೨ ಮಹಿಳೆಯರನ್ನು ಆಹ್ವಾನಿಸಲಾಗಿತ್ತು. ಹಾಗೆ ಜಿಲ್ಲೆಯಲ್ಲಿ ಮಹಿಳಾ ಮೀಸಲಾತಿ ಪ್ರಯೋಗ ಮಾಡಿದ್ದೆವು. ಅದರಿಂದ ಕೆಲವರಿಂದ ನಗೆಪಾಟಲಿಗೂ ಈಡಾಗಿದ್ದು ಬೇರೆ ವಿಷಯ.
ಕಸಾಪದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಕೂಡಲಸಂಗಮದಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದಾಗ ಎಷ್ಟು ಮಹಿಳೆಯರು ಬೆಂಬಲಿಸಿದರು? ಆ ಅಧಿವೇಶನದಲ್ಲಿದ್ದದ್ದು ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ!