ಮಹದೇವಪುರ ಕ್ಷೇತ್ರದ ಕಾಡುಗೋಡಿಯ ಅಂಚೆ ಕಚೇರಿ ಮುಖ್ಯ ರಸ್ತೆ ಹಾಗೂ ಹಳೆ ಪಂಪ್ಹೌಸ್ ರಸ್ತೆಯ ಅಕ್ಕಪಕ್ಕದಲ್ಲಿನ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಎರಡು-ಮೂರು ತಿಂಗಳುಗಳಿಂದ ಚರಂಡಿಗಳಲ್ಲಿ ಕೆಸರು ತುಂಬಿಕೊಂಡಿದೆ. ಈ ಬಗ್ಗೆ ಪಾಲಿಕೆಯ ವಾರ್ಡ್ ಸದಸ್ಯರಿಗೆ ಹಾಗೂ ಬಿಬಿಎಂಪಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಂಚೆ ಕಚೇರಿ ಮುಖ್ಯ ರಸ್ತೆಯ ತಿರುವಿನ ಬಳಿಯಲ್ಲಿ ಚರಂಡಿಗೆ ಮೇಲೆ ಹಾಕಲಾದ ಸ್ಲ್ಯಾಬ್ ಸಂಪೂರ್ಣ ಕುಸಿದು ಹೋಗಿದೆ. ಇದರ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ. ಈ ಸ್ಥಳದಲ್ಲಿ ರಾತ್ರಿ ವೇಳೆ ಅನೇಕರು ಎಡವಿ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಆಸ್ಪತ್ರೆ ಸೇರಿದ ಘಟನೆಗಳು ಸಾಕಷ್ಟು ನಡೆದಿವೆ.
ಅಲ್ಲದೆ ಚರಂಡಿಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಹಾಗೂ ಕೊಳಕು ವಾಸನೆ ತಡೆಗಟ್ಟಲು ಅಗತ್ಯವಾದ ಬ್ಲೀಚಿಂಗ್ ಪೌಡರ್ ಮತ್ತು ಸೊಳ್ಳೆ ಔಷಧಿಯನ್ನು ಸಿಂಪಡಿಸುತ್ತಿಲ್ಲ.
ಇದುವರೆಗೂ ಕಾಡುಗೋಡಿ ವಾರ್ಡ್ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆಗಳು ನಡೆದಿವೆಯೇ ಹೊರತು ದುರಸ್ತಿಯಾಗಿಲ್ಲ.
ಅನಿವಾರ್ಯವಾಗಿ ಕೆಲವೆಡೆ ಸಾರ್ವಜನಿಕರು ತಾವೇ ಖುದ್ದಾಗಿ ಮನೆ ಮುಂದಿನ ಚರಂಡಿಗಳ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿಕೊಳ್ಳುವ ಸ್ಥಿತಿ ಬಂದಿದೆ.
ಇನ್ನಾದರೂ ಪಾಲಿಕೆ ನಿರ್ಲಕ್ಷ್ಯ ತೋರದೆ ತಿಂಗಳಿಗೊಮ್ಮೆ ಚರಂಡಿಯಲ್ಲಿನ ಕೊಳಚೆಯನ್ನು ಎತ್ತಿ ಶುಚಿಗೊಳಿಸಬೇಕು. ಅಲ್ಲದೆ ತೆರೆದುಕೊಂಡ ಚರಂಡಿಗಳ ಮೇಲೆ ಸ್ಲ್ಯಾಬ್ಗಳನ್ನು ಅಳವಡಿಸಬೇಕು.