ಗೃಹ ಸಚಿವ ಅಶೋಕ್, ರಾಜ್ಯದ ಶೇ. 90ರಷ್ಟು ಶಾಸಕರಿಗೆ ಜೀವಭಯ ಇದೆ, ಎಲ್ಲರಿಗೂ ಗನ್ಮ್ಯಾನ್ ಒದಗಿಸಲಾಗಿದೆ ಎಂದು ಹೇಳುತ್ತಾರೆ. ಈ ಹೇಳಿಕೆಗಳನ್ನು ನೋಡುತ್ತಿದ್ದರೆ ನಾವು, ಕರ್ನಾಟಕದ ಆರು ಕೋಟಿ ಜನತೆ ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೇವೆಯೋ, ಜಂಗಲ್ರಾಜ್ನಲ್ಲಿ ಇದ್ದೇವೋ ಎಂದು ಅನುಮಾನ ಮೂಡುತ್ತಿದೆ. ಪ್ರಜೆಗಳಿಂದಲೇ ಚುನಾಯಿತರಾದ ಪ್ರತಿನಿಧಿಗಳ ಸಾರಥ್ಯದಲ್ಲಿ ನಡೆಸಲಾಗುವ ಸರ್ಕಾರದ ಮೂಲಭೂತ ಕರ್ತವ್ಯವೆಂದರೆ ಪ್ರಜೆಗಳ ಜೀವ, ಆಸ್ತಿ, ಮಾನ, ಘನತೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಕಾಪಾಡುವುದು. ಈ ಕಾರಣಕ್ಕಾಗಿಯೇ ನ್ಯಾಯಾಂಗ, ಕಾರ್ಯಾಂಗಗಳನ್ನೂ ಸೃಷ್ಟಿಸಲಾಗಿದೆ. ಕಾನೂನು ಪಾಲನೆಗಾಗಿ ಪೊಲೀಸ್ ವ್ಯವಸ್ಥೆಯನ್ನೂ ರೂಪಿಸಲಾಗಿದೆ.