ಬೆಂಗಳೂರು ಮಹಾನಗರದಲ್ಲಿ 80 ಸಾವಿರ ಅನಧಿಕೃತ ನೀರಿನ ಸಂಪರ್ಕಗಳಿವೆ ಎಂದು ಜಲಮಂಡಳಿಯ ಅಧ್ಯಕ್ಷರೇ ಹೇಳಿರುವ ವಿಷಯ ಓದಿ ಆಶ್ಚರ್ಯವಾಯಿತು. ಜಲಮಂಡಳಿಯಲ್ಲಿ ಪ್ರತಿಯೊಬ್ಬರೂ ಅತಿ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಇದನ್ನು ಕಂಡುಹಿಡಿದು ಅವರಿಗೆ ಶಿಕ್ಷೆ ವಿಧಿಸಿ ಸಂಪರ್ಕವನ್ನು ಕಡಿದು ಹಾಕಿ, ಅವರೂ ಬೇರೆಯವರಂತೆ ಮೀಟರ್ ಅಳವಡಿಸಿಕೊಂಡು ಪ್ರತಿ ಮಾಹೆ ಬಿಲ್ಲು ಕಟ್ಟಿ ಸಂಪರ್ಕ ಪಡೆಯಲಿ.
ಹೀಗೆ ಮಾಡುವುದರಿಂದ ಜಲಮಂಡಳಿಗೆ ಈಗ ಬರುತ್ತಿರುವ ವರಮಾನದ ಜೊತೆಗೆ ಕೋಟ್ಯಂತರ ರೂಪಾಯಿ ಸೇರ್ಪಡೆಯಾಗುತ್ತದೆ. ಅನಧಿಕೃತ ನೀರಿನ ಸಂಪರ್ಕ ವಿವರ ಪಡೆಯಲು ಮೀಟರ್ ರೀಡರುಗಳೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿ, ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ತಡೆಗಟ್ಟಬಹುದು. ಅನಧಿಕೃತ ನೀರಿನ ಸಂಪರ್ಕ ಪಡೆಯುವವರಲ್ಲಿ ಪ್ರಭಾವಿ ವ್ಯಕ್ತಿಗಳೂ ಇರಬಹುದು. ಇಲ್ಲದಿದ್ದರೆ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ನಗರದಲ್ಲಿ ಅನಧಿಕೃತ ಸಂಪರ್ಕವಿರಲು ಸಾಧ್ಯವಿಲ್ಲ ಎನಿಸುತ್ತದೆ.
ಜೊತೆಗೆ ನೀರು ಬಿಡುವ ಸ್ಥಳದಿಂದ ನೀರಿನ ಸರಬರಾಜು ಪ್ರಾರಂಭವಾದ ನಂತರ ಸಿಬ್ಬಂದಿ ಸಾಕಷ್ಟು ನಿಗಾವಹಿಸಿ ಸರಬರಾಜು ಪೈಪುಗಳಲ್ಲಿ ಮಧ್ಯದಲ್ಲಿ ಎಲ್ಲಾದರೂ ನೀರು ಸೋರುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಅಲ್ಲೂ ನೀರು ವೃಥಾ ಸೋರಿ ರಸ್ತೆಯಲ್ಲೆಲ್ಲಾ ಹರಿಯುತ್ತದೆ. ಒಟ್ಟಿನಲ್ಲಿ ಕುಡಿಯುವ ನೀರು ಸದ್ವಿನಿಯೋಗವಾಗುವಂತೆ ಮಾಡಲಿ, ವರಮಾನ ಸೋರದಂತಾಗಲಿ.