ಆಯುವವನಿಗೆ ಆಯಬೇಕಾದ ಪದಾರ್ಥದ ಬಗೆಗೆ ಜ್ಞಾನವಿಲ್ಲ. ಮಾರುವವನ ಜಾಹೀರಾತು ಮೋಡಿಗೆ ಒಳಗಾಗಿ ಯಾವುದೋ ಒಂದನ್ನು ಅವನು ಆಯುತ್ತಾನೆ. ಇಲ್ಲೊಂದು ತಮಾಷೆ ಎಂದರೆ, ಮಾರಾಟಗಾರರು ತನ್ನ ಸರಕಿನ ಗುಣಾವಗುಣಗಳನ್ನು ಹೇಳುವ ಬದಲಿಗೆ ಬೇರೆಯವರ ಸರಕಿನ ವಿಮರ್ಶೆ ಮಾಡತೊಡಗುತ್ತಾರೆ! ಇದು ನಮ್ಮ ರಾಜಕಾರಣ!
ಇನ್ನು ಅಭ್ಯರ್ಥಿಯೊಬ್ಬನನ್ನು ಆಯ್ಕೆ ಮಾಡಬೇಕಾದ ಗುರುತರ ಜವಾಬ್ದಾರಿಯನ್ನು ಹೊತ್ತ ಮತದಾರನಿಗೆ ಏನಾದರೂ ಅರ್ಹತೆಯನ್ನು ಹೇಳಲಾಗಿದೆಯಾ ಅಂದರೆ ಸಂವಿಧಾನಕರ್ತರಿಗೆ ಅದು ಹೊಳೆದೇ ಇಲ್ಲ! 18 ವರ್ಷ ಮೀರಿದ ಯಾವ ಶುಂಠ ಬೇಕಾದರೂ ಮತ ಚಲಾಯಿಸಬಹುದು!
ಇನ್ನು ಆಯ್ಕೆಯನ್ನು ಬಯಸಿದ ಅಭ್ಯರ್ಥಿಯ ಕತೆಯೂ ಇದಕ್ಕಿಂತ ಬೇರೆ ಏನೂ ಅಲ್ಲ. ಅವನು 80 ವರ್ಷ ದಾಟಿದ ಅರುಳೋ ಮರುಳೋ ಆಗಿದ್ದರೂ ಪರವಾಗಿಲ್ಲ. ಅವನು ಚುನಾವಣೆಗೆ ಸೆಟೆದು ನಿಲ್ಲುತ್ತಾನೆ! ಆಯ್ಕೆಯೂ ಆಗುತ್ತಾನೆ. ಇಂಥಾ ಅಭ್ಯರ್ಥಿಗೆ ತನ್ನ ಶರೀರವನ್ನು ಮುನ್ನಡೆಸುವುದಕ್ಕೆ ಚೈತನ್ಯವಿರುವುದಿಲ್ಲ. ಇನ್ನು ದೇಶವನ್ನೇನು ಮುನ್ನಡೆಸಿಯಾನು?
ಇನ್ನು ಬದಲಾವಣೆ ಬೇಕು ಅಂತ ಬೊಬ್ಬೆ ಹೊಡೆಯುವವರು ಒಂದು ವಿಚಾರವನ್ನು ಗಮನಿಸಬೇಕು. ಬಿ.ಜೆ.ಪಿ. ಬೇಡ ಅಂತ ಕಾಂಗ್ರೆಸ್ ಗೆಲ್ಲಿಸಿದ್ದೇವೆ. ಈಗ ಕಾಂಗ್ರೆಸ್ ಸರಿ ಇಲ್ಲ ಅಂತ ಬಿ.ಜೆ.ಪಿ.ಯನ್ನು ಗೆಲ್ಲಿಸಲಿದ್ದೇವೆ.
ಆದರೆ ಇಲ್ಲಿ ಒಂದುಂಟು. ಯಾವ ಪಕ್ಷವನ್ನು ಗೆಲ್ಲಿಸಿದರೂ ಪ್ರಮುಖವಾಗಿ ಅದೇ ಸಿದ್ದರಾಮಯ್ಯ, ಡಿ.ಕೆ.ಶಿ., ಖರ್ಗೆಗಳು, ಅದೇ ಯಡಿಯೂರಪ್ಪ, ಕರಂದ್ಲಾಜೆ, ಈಶ್ವರಪ್ಪಗಳು – ಹೀಗೆ ಅದದೇ ಜನ ನಿಮ್ಮೆದುರಿಗಿರುತ್ತಾರೆ. ಹಾಗಾದರೆ ಇಲ್ಲಿ ಏನು ಬದಲಾವಣೆಯಾದ ಹಾಗಾಯಿತು?
ಇನ್ನು ನೀವು ಈ ಎರಡೂ ಪಕ್ಷಗಳ ಸಹವಾಸವೇ ಬೇಡ ಅಂತ ಜೆ.ಡಿ (ಎಸ್) ಗೆಲ್ಲಿಸಿದರೆಂದುಕೊಳ್ಳೋಣ. ಅಲ್ಲೂ ಅದೇ ಹಳೆ ತಲೆಗಳಾದ ದೇವೇಗೌಡರು, ಕುಮಾರಸ್ವಾಮಿ, ದತ್ತಾ, ರೇವಣ್ಣ – ಇತ್ಯಾದಿ ಇರುತ್ತಾರೆ.
ಇದೆಂಥಾ ಬದಲಾವಣೆ ಸ್ವಾಮಿ? ಇದಕ್ಕೆ ಕೊನೆ ಇಲ್ಲವೇ?