ಸಮಗ್ರ ವಚನ ಸಂಪುಟದ ಮೂರನೇ ಪರಿಷ್ಕೃತ ಮುದ್ರಣಕ್ಕೆ ಕರ್ನಾಟಕ ಸರ್ಕಾರ ಹಣ ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದ್ದು ಮುದ್ರಣದ ಬಗ್ಗೆ ಪ್ರಾಧಿಕಾರ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂಬ ಅರ್ಥ ಬರುವಂತೆ ಎಸ್. ವಿದ್ಯಾಶಂಕರ ಅವರು ಬರೆದಿದ್ದಾರೆ (ವಾ. ವಾ. ಜೂನ್ 30).
ವಾಸ್ತವವಾಗಿ ಈ ಅನುದಾನವನ್ನು ವಚನ ಸಂಪುಟದ ಮೂರನೇ ಮುದ್ರಣಕ್ಕೆ ಬಿಡುಗಡೆ ಮಾಡಿರುವುದಿಲ್ಲ. ಬದಲಾಗಿ ಈ ಹಿಂದೆ ಪ್ರಕಟವಾಗಿರುವ ಸಮಗ್ರ ವಚನ ಸಂಪುಟಗಳನ್ನು ಬೈಬಲ್ ಮಾದರಿಯಲ್ಲಿ ಪ್ರಕಟಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡಲಾಗಿದ್ದು, ಸದರಿ ಜವಾಬ್ದಾರಿಯನ್ನು ನಿರ್ದೇಶನಾಲಯವು ಪುಸ್ತಕ ಪ್ರಾಧಿಕಾರಕ್ಕೆ ನೀಡಿರುತ್ತದೆ.
ಬೈಬಲ್ ಮಾದರಿ ಪುಸ್ತಕ ಮುದ್ರಣವು ಪುಸ್ತಕ ಪ್ರಾಧಿಕಾರಕ್ಕೆ ಹೊಸ ಬಗೆಯ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ದಿನಾಂಕ 17.5.2014ರಂದು ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಸಂಬಂಧ ತಜ್ಞರ ಸಮಿತಿ ರಚಿಸಲಾಗಿದೆ. ಈ ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಬೈಬಲ್ ಮಾದರಿ ಸಂಪುಟ ಪ್ರಕಟಿಸಲು ಪುಸ್ತಕ ಪ್ರಾಧಿಕಾರವು ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.