ಇತ್ತೀಚಿನ ದಶಕಗಳಲ್ಲಿ ವಿಭಜಿತ ರೈತ ಕುಟುಂಬಗಳಿಗೆ ಭೂಮಿಯ ಕೊರತೆ, ಸ್ವಂತ ಭೂಮಿ ಹೊಂದುವ ಕೃಷಿ ಕಾರ್ಮಿಕರ ಹಂಬಲ, ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಇತ್ಯಾದಿ ಕಾರಣಗಳಿಂದಾಗಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವ ಮಲೆನಾಡಿನ ಈ ಭಾಗದಲ್ಲಿ ಒತ್ತುವರಿ ಹಾಗೂ ಅಕ್ರಮ ಸಾಗುವಳಿ ಅನಿವಾರ್ಯವಾಯಿತು.
ಸರ್ಕಾರಗಳೂ ಇದನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಅವರ ಭೂಮಿಯನ್ನು ಸಕ್ರಮಗೊಳಿಸುವುದಾಗಿ ಘೋಷಿಸಿ ಅರ್ಜಿ ಪಡೆದವು. ಆದರೆ ಕೆಲವೇ ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಉಳಿದಂತೆ ಜಾರಿಯಾಗಿಲ್ಲ.
ಹೀಗೆ ಬಡ ರೈತರಿಗೆ ಹಾಗೂ ಭೂ ರಹಿತರಿಗೆ ತೋರಲಾದ ಅನುಕಂಪದ ಲಾಭವನ್ನು ಸಾಕಷ್ಟು ಕೃಷಿ ಭೂಮಿ ಹೊಂದಿರುವ ಶ್ರೀಮಂತರೂ, ರಾಜಕಾರಣಿಗಳೂ ಪಡೆಯುತ್ತಿದ್ದಾರೆ. ಅಕ್ರಮ ಹಾಗೂ ಅಧಿಕ ಸಂಪಾದನೆಯನ್ನು ಇನ್ನಷ್ಟು ಆಸ್ತಿ ಮಾಡಿಕೊಳ್ಳುವುದಕ್ಕಾಗಿ ಅರಣ್ಯ ಭೂಮಿಯನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು ಕಾಫಿ ತೋಟಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಅವರ ದುರಾಸೆಯ ಫಲವಾಗಿ ಬೆಟ್ಟಗುಡ್ಡಗಳಿಂದ ಇಳಿದು ಬರುವ ಝರಿ ತೊರೆಗಳು ಬತ್ತುತ್ತಿದ್ದು ಸಾಮಾನ್ಯ ರೈತರ ಜಮೀನುಗಳಿಗೂ, ಕಾಡುಪ್ರಾಣಿಗಳಿಗೂ ನೀರು ಇಲ್ಲವಾಗುತ್ತಿದೆ.