ರಾಷ್ಟ್ರೀಯ ರಜೆಗಳಲ್ಲೊಂದಾದ ಪೆರ್ನಾಲ್ (ಈದ್ ಉಲ್ ಫಿತ್ರ್) ದಿನದಂದು ಪ್ರತಿವರ್ಷ ರಜೆಯ ಗೋಜಲು. ಚಂದ್ರ ದರ್ಶನದ ಸಮಸ್ಯೆ. ಮಳೆಗಾಲದಲ್ಲಿ ಮೋಡಗಳ ಎಡೆಯಲ್ಲಿ ಹೇಗೂ ಚಂದ್ರದರ್ಶನ ಸಮಸ್ಯೆಯೇ.
ಘೋಷಣೆಯಾದ ದಿನದಂದು ರಜೆ ಇರುತ್ತದೆಂಬ ಗ್ಯಾರಂಟಿ ಇಲ್ಲ. ಕೊನೆಯ ಗಳಿಗೆಯಲ್ಲಿ ಆಗುವ ಆಡಳಿತಾತ್ಮಕ ನಿರ್ಧಾರಗಳಿಗಾಗಿ ಕಾದು ಕೆಲಸಕ್ಕೆ ಹಾಜರಾಗಲು ಸಿದ್ಧರಾಗಿರಬೇಕು. ಶಾಲಾ ಮಕ್ಕಳ ಪಾಲಿಗೆ ವಾಹನಗಳಲ್ಲಿ ಹೊರಡುವ ಸಂದಿಗ್ಧ. ಅದಕ್ಕಾಗಿ ಟಿ.ವಿ. ಹಾಗೂ ಪತ್ರಿಕೆಗಳಲ್ಲಿ ಏನು ಪ್ರಸಾರ ಹಾಗೂ ಪ್ರಕಟವಾಗುತ್ತದೆಂದು ಕಾಯಬೇಕು.
ಯಾವುದೇ ಪ್ರಯಾಣದ ಯೋಜನೆ ಮಾಡುವಂತಿಲ್ಲ. ಹಾಗೆ ಮಾಡಿಕೊಂಡು ಹೋದವರು ಈ ಸಲ ತಮ್ಮ ಒಂದು ರಜೆಯನ್ನು ಕಳೆದುಕೊಳ್ಳಬೇಕಾಯಿತು. ಇಷ್ಟಾಗಿಯೂ ಕೆಲವು ಊರುಗಳಲ್ಲಿ ಪೆರ್ನಾಲನ್ನು ಆಚರಿಸಿದರು. ಅಲ್ಲಿ ಮರುದಿನದ ರಜೆ ವ್ಯರ್ಥ. ಈ ಅನಿರ್ದಿಷ್ಟತೆಯಿಂದ ಮುಕ್ತವಾಗಲು ಪೆರ್ನಾಲ್ ದಿನದ ರಜೆಯನ್ನು ವಿವೇಚನೆಯ ರಜೆಯೆಂದು ಪರಿವರ್ತಿಸುವುದು ಕ್ಷೇಮವಲ್ಲವೇ?