ಯಶವಂತಪುರದ ರಾಘವೇಂದ್ರ ಕಾಲೋನಿ ಬಳಿ ಇರುವ ಪೈಪ್ಲೈನ್ ರಸ್ತೆಯ ಅವ್ಯವಸ್ಥೆ ಹೇಳತೀರದು. ಈ ರಸ್ತೆಯಲ್ಲಿರುವ ಗುಂಡಿಗಳ ಸಂಖ್ಯೆ ಅಗಣಿತ. ಮಳೆಗಾಲದಲ್ಲಿ ಇಡೀ ರಸ್ತೆಯೇ ಸ್ವಿಮ್ಮಿಂಗ್ಪೂಲ್ ಆಗುತ್ತದೆ. ಮಂಡಿವರೆಗೂ ನೀರು ನಿಲ್ಲುತ್ತದೆ. ಈ ರಸ್ತೆಯ ದುರವಸ್ಥೆಯನ್ನು ಶಾಸಕರ ಗಮನಕ್ಕೆ ತಂದರೂ ಏನೇನೂ ಉಪಯೋಗವಾಗಿಲ್ಲ.
ಸಾಮಾನ್ಯ ದಿನಗಳಲ್ಲೂ ಈ ರಸ್ತೆಯಲ್ಲಿ ಸಂಚಾರ ಕಷ್ಟಕರ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರೇ ತಮ್ಮ ಸುರಕ್ಷತೆ ನೋಡಿಕೊಳ್ಳಬೇಕಿದೆ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಇಟ್ಟಿಗೆ, ಮಣ್ಣು ತುಂಬಿ ಸಾರ್ವಜನಿಕರು ಕಷ್ಟಪಟ್ಟಿದ್ದೂ ಇದೆ. ಆದರೆ, ಮಳೆಗಾಲದಲ್ಲಿ ಮತ್ತದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅಂದಹಾಗೆ, ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ರಸ್ತೆಯಲ್ಲಿ ದೊಡ್ಡದೊಂದು ಅವಘಡ ಸಂಭವಿಸುವವರೆಗೂ ಕಾರ್ಯಪ್ರವೃತ್ತರಾಗಬಾರದು ಎಂಬ ದೃಢ ನಿಶ್ಚಯ ಮಾಡಿಕೊಂಡಿದ್ದಾರೋ ಏನೋ?