ಮೈಸೂರಿನಲ್ಲಿರುವ ಎಲ್ಲಾ ಟೀ ಸ್ಟಾಲುಗಳೂ ಸಿಗರೇಟು ಅಡ್ಡೆಗಳಾಗಿವೆ. ಈ ಟೀ ಸ್ಟಾಲುಗಳಿಂದ ಹೊರಬರುವ ಹೊಗೆಯು ಎಷ್ಟು ದಟ್ಟವಾಗಿರುತ್ತದೆಂದರೆ ಅಲ್ಲಿ ಮೋಡ ಬಿತ್ತನೆ ಮಾಡುತ್ತಿರುವರೇನೋ ಎಂಬ ಅನುಮಾನ ಮೂಡುತ್ತದೆ.
ಟೀ ಸ್ಟಾಲುಗಳಿಗೆ ಬರುವ ‘ಧೂಮಕೇತು’ಗಳು ಅಂಗಡಿಯ ಹೊರಗೆ ಕುಳಿತು ಬುಸಬುಸನೆ ಉಗುಳುವ ಹೊಗೆಯು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿದೆ. ಈ ಟೀ ಸ್ಟಾಲುಗಳಿಗೆ ಪರವಾನಗಿಯನ್ನು ನೀಡಿದ ಮೈಸೂರು ಮಹಾನಗರಪಾಲಿಕೆಗೆ ಸ್ವಲ್ಪವೂ ಜವಾಬ್ದಾರಿ ಇದ್ದಂತಿಲ್ಲ. ಗ್ರಾಹಕರಿಗೆ ಟೀ ಕುಡಿಸುತ್ತೇವೆಂದು ಪಾಲಿಕೆಯಿಂದ ಲೈಸೆನ್ಸ್ ಪಡೆಯುವ ಈ ಅಂಗಡಿಗಳವರು ಸಾರ್ವಜನಿಕರಿಗೆ ಹೊಗೆ ಕುಡಿಸುತ್ತಿದ್ದಾರೆ.
ಇವುಗಳ ಅರಿವಿರುವ ಸಂಬಂಧಪಟ್ಟ ಅಧಿಕಾರಿಗಳು ಮೂಗು ಮುಚ್ಚಿಕೊಂಡು ತೆಪ್ಪಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸುಪ್ರೀಂ ಕೋರ್ಟು ಆದೇಶಿಸಿದ್ದರೂ ಈ ಟೀ ಸ್ಟಾಲುಗಳು ಉಗುಳುತ್ತಿರುವ ಹೊಗೆ ಮೈಸೂರಿನ ಪೊಲೀಸರ ಮೂಗಿಗೆ ಬಡಿದಿಲ್ಲ.
ಮೇ 31 ವಿಶ್ವ ತಂಬಾಕು ರಹಿತ ದಿನ! ಈಗಲಾದರೂ ನಮ್ಮ ಪಾಲಿಕೆ ಮತ್ತು ಪೊಲೀಸರು, ಸಿಗರೇಟು ಅಡ್ಡೆಗಳಾಗಿರುವ ಟೀ ಸ್ಟಾಲಿನವರ ವಿರುದ್ಧ ಕ್ತಮ ಕೈಗೊಳ್ಳುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.