ಜಯನಗರ ವಿಧಾನ ಸಭಾ ಕ್ಷೇತ್ರ ಜೆ ಪಿ. ನಗರ 4ನೇ ಹಂತ, 6ನೇ ಅಡ್ಡ ರಸ್ತೆ ಬಿಬಿಎಂಪಿ ಉದ್ಯಾನದಲ್ಲಿ ಕೆಲವರು ಅಕ್ರಮವಾಗಿ ದೇವಸ್ಥಾನ ನಿರ್ಮಿಸಿಕೊಂಡು ಸಾರ್ವಜನಿಕರ ಹತ್ತಿರ ಲಕ್ಷಾಂತರ ರೂಪಾಯಿ ದೇಣಿಗೆ ವಸೂಲಿ ಮಾಡುತ್ತಿದ್ದಾರೆ. ದೇವಸ್ಥಾನದ ಗೋಪುರ ಕಟ್ಟುತ್ತೇವೆಂದು ಹೇಳಿ ಕೆಲವು ಮಹಿಳಾ ಮಣಿಗಳು ಕ್ಷೇಮಾಭಿವೃದ್ಧಿ ಸಂಘದ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ.
ಈ ಬಡಾವಣೆಯಲ್ಲಿ ಯಾವುದೇ ಸುಸಜ್ಜಿತ ಪಾರ್ಕ್ ಇಲ್ಲ. ಹೀಗಾಗಿ ನಾಗರಿಕರು ತೊಂದರೆ ಪಡುತ್ತಿದ್ದಾರೆ. ಉದ್ಯಾನ ಬೆಳೆಸಲು ಬಿಬಿಎಂಪಿ ತೋಟಗಾರಿಕೆ ಇಲಾಖೆಯವರು ಗಿಡ ನೆಟ್ಟು ಪೋಷಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಕೆಲ ಮುಖಂಡರು ಅಡ್ಡಿ ಮಾಡುವುದು ಸೋಜಿಗ ತರುತ್ತಿದೆ.
ಈ ಪಾರ್ಕ್ನಲ್ಲಿರುವ ಅಕ್ರಮ ದೇವಾಲಯವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ತುರ್ತಾಗಿ ತೆರವು ಮಾಡಬೇಕು. ನ್ಯಾಯಾಲಯದ ನಿರ್ದೇಶನದಂತೆ ಉದ್ಯಾನ ನಿರ್ಮಿಸಿ ಜನರಿಗೆ ಶುದ್ಧ ಗಾಳಿ ಸಿಗುವಂತೆ ಮಾಡಬೇಕು. ಅಕ್ರಮ ದೇವಾಲಯಕ್ಕಾಗಿ ಹಣ ವಸೂಲು ಮಾಡುವವರ ಮೇಲೆ ಕ್ರಮ ಜರುಗಿಸಬೇಕು.
- ಶೇಷಗಿರಿ
ಬಡಾವಣೆಯ ಬವಣೆ
ಉತ್ತರಹಳ್ಳಿಯ ಸಮೀಪದ ಪೂರ್ಣಪ್ರಜ್ಞ ನಗರ ಶೀಘ್ರವಾಗಿ ಬೆಳೆಯುತ್ತಿರುವ ದೊಡ್ಡ ಬಡಾವಣೆಯಾಗಿದೆ. ಆದರೆ ಇಲ್ಲಿ ಗಿಡಗಂಟಿಗಳು, ಪಾರ್ಥೇನಿಯಂ ಕಳೆ ಹೇರಳವಾಗಿ ಬೆಳೆದಿದೆ. ಇದರಿಂದ ಸೊಳ್ಳೆಗಳು ಜಾಸ್ತಿಯಾಗಿ ಅನೇಕ ಕಾಯಿಲೆಗಳು ಬರುತ್ತದೆ ಎಂಬುದು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ.
ಇಲ್ಲಿ ಹಾವು, ಹಲ್ಲಿಗಳು ಕಾಟ ಜಾಸ್ತಿ. ಹೀಗಾಗಿ ಮಕ್ಕಳು ಮತ್ತು ನಾಗರಿಕರು ಓಡಾಡುವುದು ಬಹಳ ಕಷ್ಟವಾಗಿದೆ. ಆದ್ದರಿಂದ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಿ ಬಡಾವಣೆ ನಿವಾಸಿಗಳ ಆರೋಗ್ಯವನ್ನು ಕಾಪಾಡಬೇಕಾಗಿ ಪ್ರಾರ್ಥನೆ.
ಗಿಡಗಂಟಿಗಳನ್ನು ಆಗಾಗ್ಗೆ ತೆಗೆಸಬೇಕು, ಡಾಂಬರು ಹಾಕಿಸಬೇಕು, ಸೊಳ್ಳೆಗಳನ್ನು ನಿರ್ಮೂಲನೆಗೆ ಔಷಧ ಸಿಂಪರಿಡಬೇಕು, ನಾಯಿಗಳ ಹಾವಳಿ ತಡೆಯಬೇಕು, ದಿವಸಕ್ಕೆ 3 ಬಾರಿಯಾದರೂ ಪೊಲೀಸ್ ಗಸ್ತು ಬೇಕು.
- ಟಿ. ಎನ್. ಚಂದ್ರಶೇಖರ್