ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (ಟಿಇಟಿ)ನಡೆಸಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿರುವುದು ಅತ್ಯಂತ ಸಮಂಜಸವಾದ ನಿರ್ಧಾರ. ಶಿಕ್ಷಕರಾಗುವುದು ಎಂದರೆ ಅನಾಯಾಸವಾಗಿ ಸಂಬಳ ಸಿಗುವ ಒಂದು ಕೆಲಸ ಎಂಬ ಮನೋಭಾವ ಇದರಿಂದ ಸ್ವಲ್ಪವಾದರೂ ಕಡಿಮೆಯಾದೀತು. ಈ ಪರೀಕ್ಷೆಗಳು ಮಾತ್ರ ತುಂಬಾ ಕಟ್ಟುನಿಟ್ಟಾಗಿಯೂ, ಪ್ರಾಮಾಣಿಕವಾಗಿಯೂ ನಡೆಯಬೇಕಾಗುತ್ತದೆ.
ಈ ‘ಟಿಇಟಿ’ ಪರೀಕ್ಷೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೂ ಕಡ್ಡಾಯವಾದರೆ ಇನ್ನಷ್ಟು ಉತ್ತಮ. ಕನಿಷ್ಠ ಐದು ವರ್ಷಕ್ಕೊಮ್ಮೆ ಎಲ್ಲ ಶಿಕ್ಷಕರೂ ಈ ಪರೀಕ್ಷೆಯನ್ನು ಬರೆದು ನಿಗದಿ ಪಡಿಸಿದ ಅಂಕಗಳನ್ನು ಪಡೆಯುವುದು ಕಡ್ಡಾಯವಾಗಬೇಕು.
ಗುರಿ ಸಾಧಿಸದ ಶಿಕ್ಷಕರ ಮುಂಬಡ್ತಿಯನ್ನು ತಡೆಹಿಡಿಯುವಂತಹ ನಿಯಮಗಳೂ ಜಾರಿಯಾಗಬೇಕು.
ಒಮ್ಮೆ ಶಿಕ್ಷಕರಾಗಿ ನೇಮಕವಾದ ನಂತರ ಯಾವ ಜ್ಞಾನವನ್ನೂ ಹೆಚ್ಚಿಸಿಕೊಳ್ಳದೆ, ಮಕ್ಕಳ ಮನಸ್ಸನ್ನು ಅರಿಯಲು ಯತ್ನಿಸದೆ, ಕಲಿಸುವ ವಿಧಾನಗಳಲ್ಲಿ ಉಂಟಾಗುತ್ತಿರುವ ಹೊಸ ಪ್ರಯೋಗಗಳ ಅರಿವೇ ಇಲ್ಲದ ಬಹುಪಾಲು ಶಿಕ್ಷಕರು ಇದರಿಂದ ಕಲಿಸುವ ವಿಧಾನಗಳನ್ನು ಬದಲಿಸಿಕೊಳ್ಳುವ, ಕಲಿಸುವ ಬದ್ಧತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನಂತೂ ಮಾಡುತ್ತಾರೆ. ಇದರ ಲಾಭವಂತೂ ಮುಂದಿನ ಜನಾಂಗಕ್ಕೆ ಸಿಗುತ್ತದೆ.
ಪ್ರಾಥಮಿಕದಿಂದ ಪ್ರೌಢಶಾಲೆಗೆ.. ಅಲ್ಲಿಂದ ಮುಂದೆ ಕಾಲೇಜುಗಳಿಗೆ ಬಡ್ತಿ ಹೊಂದುವ ಏಕಮಾತ್ರ ಉದ್ದೇಶದಿಂದ ಇಂದು ಪದವಿ, ಬಿಎಡ್ ಸರ್ಟಿಫಿಕೆಟ್ ಪಡೆಯಲು ಶಿಕ್ಷಕರಲ್ಲಿ ನೂಕುನುಗ್ಗಲು ಹೆಚ್ಚಿರುವುದು ನಿಜ. ಇಂತಹ ಪರಿಸ್ಥಿತಿಯನ್ನು ಬಳಸಿಕೊಂಡು ಕಡ್ಲೆಪುರಿಯಂತೆ ಪದವಿಗಳನ್ನು ನೀಡುತ್ತಿರುವ ಮಧ್ಯವರ್ತಿ ಸಂಸ್ಥೆಗಳು, ವ್ಯಕ್ತಿಗಳು ಎಲ್ಲ ಕಡೆ ಹೆಚ್ಚಿರುವುದೂ ನಿಜ.
ಈ ದಂಧೆಗೆ ಕಡಿವಾಣ ಹಾಕಬೇಕೆಂದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರನ್ನೂ ಇಂತಹದೊಂದು ಪರೀಕ್ಷೆಗೆ ಒಳಪಡಿಸಲೇಬೇಕು.