ಕೆಲವು ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ನೇಮಕಕ್ಕೆ ಅನುಮತಿಯನ್ನೇ ನೀಡಿಲ್ಲ. ನಮ್ಮ ರಾಜ್ಯದಲ್ಲಿ ನಿಯಮಿತವಾಗಿ ಸಿಬ್ಬಂದಿ ನೇಮಕ ಆಗುತ್ತಿದೆ. ಆದರೆ, ಆ ಸಿಬ್ಬಂದಿ ಅಗತ್ಯ ಇರುವ ಜಾಗದಲ್ಲಿ ಇಲ್ಲ. ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಆಗುವುದು ಬೆಳಗಾವಿ, ವಿಜಯಪುರ ಹಾಗೂ ಕಲಬುರ್ಗಿ ಜಿಲ್ಲೆಗಳಿಂದ. ಅವರನ್ನು ಆರಂಭದಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಿಗೆ ನಿಯೋಜನೆ ಮಾಡಲಾಗುತ್ತದೆ. ಅವರು ಅಲ್ಲಿ ನಾಲ್ಕೈದು ವರ್ಷ ಕೆಲಸ ಮಾಡುತ್ತಾರೆ ಅಷ್ಟೆ. ಬಳಿಕ ರಾಜಕೀಯ ಪ್ರಭಾವ ಬಳಸಿ ತಮ್ಮೂರಿಗೆ ವರ್ಗ ಮಾಡಿಸಿಕೊಳ್ಳುತ್ತಾರೆ. ಆ ಜಿಲ್ಲೆಗಳಲ್ಲಿ ಸಿಬ್ಬಂದಿ ತುಂಬಿ ತುಳುಕುತ್ತಿದ್ದಾರೆ. ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಂತರೆ ಬಹುಪಾಲು ಸಮಸ್ಯೆ ಪರಿಹಾರ ಆಗುತ್ತದೆ.
ಕಾಡಿನಲ್ಲಿ ಸಮಸ್ಯೆ ಸೃಷ್ಟಿಯಾದ ಸಂದರ್ಭದಲ್ಲಿ ಹೆಣಗಾಡುವವರು ಅರಣ್ಯ ವೀಕ್ಷಕರು, ಅರಣ್ಯ ರಕ್ಷಕರು ಹಾಗೂ ವಲಯ ಅರಣ್ಯಾಧಿಕಾರಿಗಳು. ಹಿರಿಯ ಅಧಿಕಾರಿಗಳು ಪೂರ್ತಿ ಹೊಣೆಯನ್ನು ಅವರಿಗೆ ಬಿಟ್ಟು ಬಿಡುತ್ತಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಜಿಲ್ಲಾ ಕೇಂದ್ರಸ್ಥಾನ ಬಿಟ್ಟು ಹೊರಕ್ಕೇ ಬರುವುದಿಲ್ಲ. ಈ ಮನೋಭಾವ ಮೊದಲು ಹೋಗಬೇಕು. ಕಾಳ್ಗಿಚ್ಚು ಉಂಟಾದ ವೇಳೆ ಅವರು ಅರಣ್ಯದಲ್ಲೇ ಮೊಕ್ಕಾಂ ಹೂಡಬೇಕು. ಆಗ ಉಳಿದ ಸಿಬ್ಬಂದಿಗೆ ಹೆಚ್ಚಿನ ಸ್ಫೂರ್ತಿ ಬರುತ್ತದೆ.
ದನ ಕಾಯುವವರು, ಜೇನು ತೆಗೆಯುವವರು ತಮ್ಮ ಸ್ವಂತ ಲಾಭಕ್ಕಾಗಿ ಅರಣ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ಇಡೀ ಕಾಡು ಭಸ್ಮವಾಗುತ್ತಿದೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಂರಕ್ಷಿತ ಅರಣ್ಯಗಳಲ್ಲಿ ಲಂಟಾನ ಗಿಡಗಳು ವ್ಯಾಪಕ ಪ್ರಮಾಣದಲ್ಲಿ ಬೆಳೆದಿವೆ. ಇವುಗಳು ಸಹ ಬೆಂಕಿ ಹಬ್ಬಲು ಕಾರಣವಾಗುತ್ತಿವೆ. ಈ ಗಿಡಗಳನ್ನು ತೆಗೆಯಲು ಹೆಚ್ಚುವರಿ ಅನುದಾನ ಒದಗಿಸಬೇಕು. ಮೀಸಲು ಅರಣ್ಯಗಳಲ್ಲಿ ಬಿದ್ದ ಮರಗಳು ಹಾಗೂ ಸತ್ತ ಮರಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಇವುಗಳನ್ನು ನಿಯಮಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಸಣ್ಣ ಬೆಂಕಿಯೂ ದೊಡ್ಡದಾಗಿ ವ್ಯಾಪಿಸಲು ಇವು ಕಾರಣ ಆಗುತ್ತಿವೆ. ಇವುಗಳನ್ನು ಹಂತ ಹಂತವಾಗಿ ತೆಗೆಯಬೇಕು.
ಅರಣ್ಯದ ಮೇಲೆ ನಿಗಾ ಇಡಲು ಹಾಗೂ ಕಾಳ್ಗಿಚ್ಚು ನಂದಿಸಲು ಇಲಾಖೆ ದಿನಗೂಲಿ ಆಧಾರದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ಸ್ವರಕ್ಷಣೆಗಾಗಿ ಅವರಿಗೆ ಬೆಂಕಿ ತಡೆದುಕೊಳ್ಳುವ ಗ್ಲೌಸ್, ಎದೆಗವಚ, ನೀರಿನ ಬಾಟಲ್ ಹಾಗೂ ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ ನೀಡಬೇಕು. ಅವರಿಗೆ ಇನ್ನಷ್ಟು ಕೌಶಲ ತರಬೇತಿ ಕೊಡಬೇಕು.
ಕುದುರೆಮುಖ ಭಾಗದಲ್ಲಿ ನಾಲ್ಕು ನದಿಗಳ ಉಗಮ ಆಗುತ್ತಿದೆ. ಆದರೆ, ಈ ಭಾಗದಲ್ಲಿ ದಶಕಗಳಿಂದ ಅರಣ್ಯವು ಬೆಂಕಿಗೆ ಆಹುತಿ ಆಗುತ್ತಿದೆ. ಇದರಿಂದಾಗಿ ಮಳೆ ಪ್ರಮಾಣವೂ ಕಡಿಮೆಯಾಗುತ್ತಿದೆ. ನದಿಗಳ ವ್ಯಾಪ್ತಿ ಕುಗ್ಗುತ್ತಿದೆ. ಈ ಸಮಸ್ಯೆಯನ್ನು ಜನ ಅರ್ಥ ಮಾಡಿಕೊಳ್ಳಬೇಕು. ಅರಣ್ಯ ರಕ್ಷಣೆಗೆ ಇಲಾಖೆಯ ಜತೆಗೆ ಕೈಜೋಡಿಸಬೇಕು.