‘ಅರಣ್ಯದ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳುವಾಗ ತತ್ಕ್ಷಣದ ಲಾಭವನ್ನೇ ಮುಖ್ಯವಾಗಿ ಪರಿಗಣಿಸಿದರೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾದುದು ಅನಿವಾರ್ಯ’.
–ಪರಿಸರ ತಜ್ಞರೂ ಆಗಿರುವ ಸಿಕ್ಕಿಂ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಥಾಮಸ್ ಚಾಂಡಿ ಅವರ ಸ್ಪಷ್ಟವಾದ ಅಭಿಪ್ರಾಯ ಇದು.
‘ಪಶ್ಚಿಮಘಟ್ಟ ಶ್ರೇಣಿಯಲ್ಲಿ ಜೈವಿಕ ಸೂಕ್ಷ್ಮ ವಲಯದ ಪಟ್ಟಿಯಿಂದ ಹಲವು ಪ್ರದೇಶಗಳನ್ನು ಕೈಬಿಡುವಂತೆ ನಡೆಸಿದ ಪ್ರಯತ್ನವೇ ಇರಬಹುದು, ಯಾವುದೇ ಭೂಭಾಗವನ್ನು ಸಂರಕ್ಷಿತ ಮೀಸಲು ಅರಣ್ಯ ಪಟ್ಟಿಯಿಂದ ಹೊರಗಿಡುವ ಆದೇಶವೇ ಆಗಿರಬಹುದು, ರಸ್ತೆಗಳ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲು ನೀಡಿದ ಅನುಮತಿಯೇ ಇರಬಹುದು, ಎಲ್ಲ ನಿರ್ಧಾರಗಳಿಗೂ ಈ ಮಾತು ಅನ್ವಯ’ ಎಂದು ಹೇಳುತ್ತಾರೆ. ‘ನಾವು ಕೊಡಲಿ ಪೆಟ್ಟು ಹಾಕುವುದು ಮರಕ್ಕಲ್ಲ, ನಮ್ಮ ಭವಿಷ್ಯಕ್ಕೆ ಎಂಬುದನ್ನು ಮರೆಯಬಾರದು’ ಎಂದು ಅವರು ಎಚ್ಚರಿಸುತ್ತಾರೆ.
‘ನಮ್ಮ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅರಣ್ಯದ ಮಹತ್ವವನ್ನು 20 ವರ್ಷಗಳಷ್ಟು ಹಿಂದೆಯೇ ಸರಿಯಾಗಿ ಗ್ರಹಿಸಿದ್ದಾರೆ. ಹೀಗಾಗಿ ನಮ್ಮ ಅರಣ್ಯ ಪ್ರದೇಶ ಈಗ ಶೇ 4ರಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ಚಾಂಡಿ. ಹವಾಮಾನ ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ:
* ಅರಣ್ಯ ಸಂರಕ್ಷಣೆ ವಿಷಯದಲ್ಲಿ ಸಿಕ್ಕಿಂ ಮಾಡಿದ್ದೇನು? ಪರಿಸರಕ್ಕೆ ಸಂಬಂಧಪಟ್ಟಂತೆ ನಿಮ್ಮ ಮುಖ್ಯಮಂತ್ರಿಯವರ ನಿಲುವುಗಳು ಹೇಗೆ ಭಿನ್ನವಾಗಿವೆ?
ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ ಒಂದು ಕಾಲದಲ್ಲಿ ಟಿಂಬರ್ ಉದ್ಯಮಕ್ಕೆ ಹೆಸರಾಗಿತ್ತು. ಮರಗಳನ್ನು ಯಾವ ಪ್ರಮಾಣದಲ್ಲಿ ನಾಶ ಮಾಡಲಾಗಿತ್ತೆಂದರೆ, ಅರಣ್ಯದ ಮಧ್ಯದಲ್ಲಿ ಬಂಜರು ಭೂಮಿಯಂತಹ ದ್ವೀಪಗಳೇ ನಿರ್ಮಾಣವಾಗಿದ್ದವು. ಕೃಷಿ ಪ್ರಧಾನವಾಗಿರುವ ಗ್ರಾಮಾಂತರ ಭಾಗದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲೇ ದನಗಳನ್ನು ಮೇಯಿಸುವ ಪ್ರವೃತ್ತಿ ಹೆಚ್ಚಿತ್ತು. ಕಾಡಿನ ಖಾಲಿ ಪ್ರದೇಶದಲ್ಲಿ ನೆಟ್ಟ ಸಸಿಗಳನ್ನು ಅವುಗಳು ತಿಂದು ಬಿಡುತ್ತಿದ್ದವು. ಮೊದಲು, ಗೋಪಾಲಕರು ದನಗಳನ್ನು ಮೇಯಿಸಲು ಗ್ರಾಮಗಳಿಗೆ ಹೊಂದಿಕೊಂಡಿರುವ ‘ಗೋಚಾರಣ’ಗಳಿಗೆ (ಕರ್ನಾಟಕದ ಗೋಮಾಳಗಳಂತೆ) ಮರುಜೀವ ನೀಡಲಾಯಿತು. ಬಳಿಕ, ಮೀಸಲು ಅರಣ್ಯದಲ್ಲಿ ದನ ಮೇಯಿಸದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಯಿತು. ಪರಿಣಾಮ, 20 ವರ್ಷಗಳಲ್ಲಿ ಅರಣ್ಯ ಪ್ರದೇಶ ಶೇ 4ರಷ್ಟು ವೃದ್ಧಿಯಾಗಿದೆ. ಬತ್ತಿದ್ದ ಜಲಮೂಲಗಳಲ್ಲಿ ಮತ್ತೆ ನೀರಿನ ಸೆಲೆಗಳು ಚಿಮ್ಮಿವೆ. ಜೀವವೈವಿಧ್ಯವನ್ನು ಕಾಪಾಡಲು ಕೂಡ ಸಾಧ್ಯವಾಗಿದೆ.
ಕಾಡಿನ ರಕ್ಷಣೆಯಲ್ಲಿ ಪಂಚಾಯಿತಿಗಳ ಪಾತ್ರವೂ ಇದ್ದು, ಸಮುದಾಯದ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಮಟ್ಟದಲ್ಲಿ ರಚಿಸಿರುವ ಅರಣ್ಯ ನಿರ್ವಹಣಾ ಸಮಿತಿಗಳು ಕಾಡಿನ ಒಣಗಿದ ಮರಗಳನ್ನು ಗುರುತಿಸುವುದು, ಖಾಲಿ ಪ್ರದೇಶದಲ್ಲಿ ಯಾವ ಸಸಿಗಳನ್ನು ನೆಡಬೇಕು ಎಂಬುದನ್ನು ನಿರ್ಧರಿಸುವುದು, ‘ಗೋಚಾರಣ’ಗಳು ಹಸಿರಿನಿಂದ ಕೂಡಿರುವಂತೆ ನೋಡಿಕೊಳ್ಳುವುದು– ಹೀಗೆ ಎಲ್ಲ ಮಹತ್ವದ ಹೊಣೆಯನ್ನೂ ನಿಭಾಯಿಸುತ್ತವೆ. ಪ್ರತಿವರ್ಷ ಜೂನ್ 25ರಂದು ‘ಭೂಮಿಗಾಗಿ 10 ನಿಮಿಷ’ ಆಂದೋಲನ ನಡೆಯುತ್ತದೆ. ಅವತ್ತು ಗಡಿಯಾರದ ಮುಳ್ಳು 10.30 ತೋರಿಸುತ್ತಿದ್ದಂತೆ ರಾಜ್ಯದ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡುತ್ತಾರೆ. ರಾಜ್ಯದಾದ್ಯಂತ ಪೋಖರಿ (ಕೆರೆ) ಸಂರಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ, ಪ್ರತಿ ಶಾಲೆಯಲ್ಲೂ ನೇಚರ್ ಕ್ಲಬ್ ಸ್ಥಾಪಿಸಲಾಗಿದೆ.
ನಮ್ಮ ರಾಜ್ಯದಲ್ಲಿ 20 ವರ್ಷಗಳ ಹಿಂದೆಯೇ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿತದ ಮೇಲೆ ಎರಡು ವರ್ಷಗಳ ಹಿಂದೆಯೇ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ಭಾರಿ ಪ್ರಮಾಣದ ದಂಡ ಹಾಕಲಾಗುತ್ತದೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಬಾಟಲಿ ನೀರನ್ನು ಬಳಸುವಂತಿಲ್ಲ. ಬಟ್ಟೆಯ ನೂಲಿನಂತೆ, ಸರ್ಕಾರದ ಪ್ರತಿ ನಡೆಯಲ್ಲೂ ಪರಿಸರದ ಕಾಳಜಿ ಹಾಸುಹೊಕ್ಕಾಗಿದೆ. ಈ ಎಲ್ಲ ನಿರ್ಧಾರಗಳಲ್ಲಿ ಮುಖ್ಯಮಂತ್ರಿಯವರ ಅರಣ್ಯ ಪ್ರೇಮದ ಪ್ರಭಾವ ಇದೆ.