ಬೆಂಗಳೂರು: `ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಜುಲೈ 25ರಂದು ಯಲಹಂಕದ ಎನ್.ಇ.ಎಸ್ ಕಚೇರಿ ವೃತ್ತ ವಲಯದ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿವರೆಗೆ ತಮಟೆ ಚಳವಳಿ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ~ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಎಚ್.ಮಾರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ದಲಿತ ಅಲ್ಪಸಂಖ್ಯಾತರ ಸಮುದಾಯಗಳಿಗೆ ಶಾಶ್ವತ ನೆಲೆಯನ್ನು ಕಲ್ಪಿಸಲು ನಿರಂತರ ಪರಿಶ್ರಮ ಪಟ್ಟು ದೇಶಕ್ಕೆ ಸಂವಿಧಾನವನ್ನು ಅಂಬೇಡ್ಕರ್ ನೀಡಿದರು. ಆದರೆ, ಸಂವಿಧಾನದ ಆಶಯಗಳನ್ನು ಜಾರಿ ಮಾಡದೆ ಮತಬ್ಯಾಂಕ್ ರಾಜಕಾರಣ ಮಾಡಿ ದಲಿತರ ಸವಲತ್ತುಗಳನ್ನು ಕಸಿದುಕೊಳ್ಳುತ್ತಾ ಬಂದಿದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ದಲಿತರಿಗೆ ಸಿಗಬೇಕಾದ ಶೇ 18 ರಷ್ಟು ಮೀಸಲಾತಿ ಇದೂವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರು, ಸರ್ಕಾರ ಮಾತ್ರ ಕಣ್ಣಿದ್ದರೂ ಸಹ ಮೂಕ ಪ್ರೇಕ್ಷಕರಂತೆ ನಟನೆ ಮಾಡುತ್ತಿದೆ~ ಎಂದರು.
`ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಬಗ್ಗೆ ಇತ್ತೀಚೆಗೆ ನಗರ ಮತ್ತು ಗ್ರಾಮಾಂತರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಾವಿರಾರು ಕಾರ್ಯಕರ್ತರು ಮುಖ್ಯಮಂತ್ರಿಗೆ ಮನವಿಯನ್ನು ನೀಡಲಾಯಿತು.
ಈ ವಿಚಾರವಾಗಿ ಪ್ರತಿಮೆಗೆ 18 ಕೊಟಿ ರೂಪಾಯಿ ಅಂದಾಜು ವೆಚ್ಚದ ಪ್ರತಿಮೆಯನ್ನು ತಯಾರಿಸಿದರೂ ಇದುವೆರೆಗೂ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪನೆ ಮಾಡದೇ ರಾಜಕೀಯ ಮಾಡುತ್ತಿದೆ. ಯಲಹಂಕ ವಿಧಾನ ಸಭಾ ಕ್ಷೇತ್ರದ ಎನ್.ಇ.ಎಸ್. ಕಚೇರಿ ವೃತ್ತ ಅಥವಾ ಯಲಹಂಕ ಪೊಲೀಸ್ ಠಾಣಾ ವೃತ್ತಕ್ಕೆ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು~ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ತಮ್ಮಯ್ಯ, ಸಮಿತಿ ನಗರ ಜಿಲ್ಲಾ ಪ್ರಧಾನ ಸಂಚಾಲಕ ಎಂ.ಸಿ.ನಾರಾಯಣ್, ಸಮಿತಿಯ ಗ್ರಾಮಾಂತರ ಜಿಲ್ಲಾ ಸಂಚಾಲಕ ಎಲ್.ಎಂ.ಮುನಿಬೈರಪ್ಪ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.