ಮಂಗಳೂರು: ಮೋಡ ಕವಿದ ವಾತಾವರಣದಲ್ಲಿ ಗಾಳಿಯ ವೇಗ ಮತ್ತು ತೆರೆಗಳ ಸವಾಲು ಮೀರಿದ 16 ವರ್ಷದೊಳಗಿನ ವಿಭಾಗದ ಸರ್ಫರ್, ಚೆನ್ನೈನ ಕಿಶೋರ್ ಕುಮಾರ್ ಇಲ್ಲಿನ ಮೂಲ್ಕಿ ಸಮೀಪದ ಸಸಿಹಿತ್ಲು ಬೀಚ್ನಲ್ಲಿ ಗುರುವಾರ ಸಂಚಲನ ಉಂಟುಮಾಡಿದರು.
ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ಷಿಪ್ನಲ್ಲಿ ಅತ್ಯಧಿಕ 12.67 ಪಾಯಿಂಟ್ ಕಲೆ ಹಾಕಿದ ಕಿಶೋರ್ 16 ವರ್ಷದೊಳಗಿನವರ ಬಾಲಕರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ತಯಿನ್ ಅರುಣ್ (10.83 ಪಾಯಿಂಟ್), ದಿನೇಶ್ ಸೆಲ್ವಮಣಿ (9.53), ಶೇಖರ್ ಪಚಾಯಿ (9), ಹರೀಸ್ ಪಿ (8.63) ಮತ್ತು ಸೆಲ್ವಂ ಎಂ (8.53) ಕೂಡ ಉತ್ತಮ ಸಾಮರ್ಥ್ಯ ತೋರಿದರು.
ಚಾಂಪಿಯನ್ಷಿಪ್ನ ನಾಲ್ಕನೇ ಆವೃತ್ತಿಯ ಸ್ಪರ್ಧೆಗಳ ಮೊದಲ ದಿನ ಪುರುಷರ ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಫರ್ಗಳು ಮೇಲುಗೈ ಸಾಧಿಸಿದ್ದು ಮಹಿಳೆಯರ ವಿಭಾಗದ ಸೆಮಿಫೈನಲ್ ಸ್ಪರ್ಧೆಯನ್ನು ಮಳೆಯಿಂದಾಗಿ ಶುಕ್ರವಾರಕ್ಕೆ ಮುಂದೂಡಲಾಯಿತು. ಪುರುಷರ ವಿಭಾಗದಲ್ಲಿ 12 ಸರ್ಫರ್ಗಳು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಕಳೆದ ವರ್ಷದ ರ್ಯಾಂಕಿಂಗ್ ಆಧಾರದಲ್ಲಿ ನೇರವಾಗಿ ಎರಡನೇ ಸುತ್ತು ತಲುಪಿರುವ 16 ಮಂದಿಯನ್ನು ಈ 12 ಮಂದಿ ಶುಕ್ರವಾರ ಎದುರಿಸಲಿದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಲು ಪ್ರಯತ್ನಿಸಲಿದ್ದಾರೆ.
ಬಾಲಕರ ವಿಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಫರ್ಗಳ ನಡುವೆ ತುರುಸಿನ ಸ್ಪರ್ಧೆ ಇತ್ತು. ಎರಡೂ ರಾಜ್ಯಗಳ ತಲಾ ನಾಲ್ವರು ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು.