ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೇನ್‌, ರಾಜಾವತ್‌ ಶುಭಾರಂಭ

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಕಿರಣ್‌ ನಿರ್ಗಮನ
Published 4 ಜೂನ್ 2024, 16:37 IST
Last Updated 4 ಜೂನ್ 2024, 16:37 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಲಕ್ಷ್ಯ ಸೇನ್‌ ಮತ್ತು ಪ್ರಿಯಾಂಶು ರಾಜಾವತ್‌ ಅವರು ಇಂಡೊನೇಷ್ಯಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಸೇನ್‌ ಅವರು ಸೋಮವಾರ ನಡೆದ ಮೊದಲ ಸುತ್ತಿನಲ್ಲಿ 21–12, 21–17ರಿಂದ ಜಪಾನ್‌ನ ಕಂಟಾ ತ್ಸುನೇಯಮಾ ವಿರುದ್ಧ ನೇರ ಗೇಮ್‌ಗಳ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅವರು ಮುಂದಿನ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಆತಿಥೇಯ ದೇಶದ ಆ್ಯಂಟನಿ ಸಿನಿಸುಕ್ ಗಿಂಟಿಂಗ್ ಅವರನ್ನು ಎದುರಿಸುವರು.

ರಾಜಾವತ್‌ ಅವರು ಸ್ವದೇಶದ ಎಚ್‌.ಎಸ್‌. ಪ್ರಣಯ್ ಅವರಿಗೆ ಆಘಾತ ನೀಡಿದರು. 32ರ ಘಟ್ಟದ ಪಂದ್ಯದಲ್ಲಿ ರಾಜಾವತ್‌ 21–17, 21–12 ರಿಂದ ವಿಶ್ವದ 9ನೇ ಕ್ರಮಾಂಕದ ಪ್ರಣಯ್‌ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಎಂಟನೇ ಶ್ರೇಯಾಂಕದ ಕುನ್ಲವುಟ್ ವಿಟಿಡ್ಸರ್ನ್ (ಥಾಯ್ಲೆಂಡ್‌) ಅವರನ್ನು ಎದುರಿಸುವರು.

ಭಾರತದ ಮತ್ತೊಬ್ಬ ಸಿಂಗಲ್ಸ್‌ ಆಟಗಾರ ಕಿರಣ್‌ ಜಾರ್ಜ್‌ ಕೂಡ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಅವರು 21-11, 10-21, 20-22 ರಿಂದ ಚೀನಾದ ಹಾಂಗ್ ಯಾಂಗ್ ವೆಂಗ್ ವಿರುದ್ಧ ಕಠಿಣ ಹೋರಾಟ ನಡೆಸಿ, ಸೋಲೊಪ್ಪಿಕೊಂಡರು. ಮೊದಲ ಗೇಮ್‌ನಲ್ಲಿ ಹಿಡಿತ ಸಾಧಿಸಿದ್ದ ಜಾರ್ಜ್‌, ನಂತರದ ಗೇಮ್‌ಗಳಲ್ಲಿ ಮುಗ್ಗರಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಸಾ ಜೊಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿಯು ಮೊದಲ ಸುತ್ತಿನಲ್ಲಿ 21-15, 21-11ರಿಂದ ಚೀನಾ ತೈಪೆಯ ಯು ಪೈ ಚೆಂಗ್ ಮತ್ತು ಯು ಹ್ಸಿಂಗ್ ಸನ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆಯಿತು. ಭಾರತದ ಜೋಡಿಯು ಮುಂದಿನ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಮಯೂ ಮತ್ಸುಮೊಟೊ ಮತ್ತು ವಕಾನಾ ನಾಗಹರಾ (ಜಪಾನ್‌) ಜೋಡಿಗೆ ಸವಾಲೊಡ್ಡಲಿದೆ.

ಮಿಶ್ರ ಡಬಲ್ಸ್ ಜೋಡಿ ಬಿ. ಸುಮಿತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ಅವರು ಆರಂಭಿಕ ಸುತ್ತಿನಲ್ಲಿ ಅಮೆರಿಕದ ವಿನ್ಸನ್ ಚಿಯು ಮತ್ತು ಜೆನ್ನಿ ಗೈ ವಿರುದ್ಧ ಗೆಲುವು ಸಾಧಿಸಿದರು. ಭಾರತದ ಜೋಡಿಯು 18-21, 21-16, 21-17ರಿಂದ ಮೇಲುಗೈ ಪಡೆದು, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT