ಬೆಂಗಳೂರು: ಮಣಿಂದರ್ ಸಿಂಗ್, ನಿತಿನ್ ಕುಮಾರ್ ಅವರ ಅಮೋಘ ರೈಡಿಂಗ್ ನೆರವಿನಿಂದ ಬೆಂಗಾಲ್ ವಾರಿಯರ್ಸ್ ತಂಡ 60–42 ಪಾಯಿಂಟ್ಗಳಿಂದ ಪಟ್ನಾ ಪೈರೆಟ್ಸ್ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್ನ ಹತ್ತನೇ ಅವೃತ್ತಿಯಲ್ಲಿ ಅಜೇಯ ಓಟ ಮುಂದುವರಿಸಿ ಅಗ್ರಸ್ಥಾನಕ್ಕೇರಿತು. ಒಟ್ಟು 102 ಪಾಯಿಂಟ್ಗಳನ್ನು ಕಂಡ ಪಂದ್ಯದಲ್ಲಿ ಐವರು ರೈಡರ್ಗಳು ಸೂಪರ್ ಟೆನ್ ಸಾಧನೆಗೆ ಪಾತ್ರರಾಗಿದ್ದು ವಿಶೇಷ.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ ವಾರಿಯರ್ಸ್ 27–16 ಪಾಯಿಂಟ್ಗಳಿಂದ ಮುಂದಿತ್ತು. ಬೆಂಗಾಲ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದು, ಒಂದು ಪಂದ್ಯವನ್ನು ಟೈ ಮಾಡಿಕೊಂಡಿದ್ದು 18 ಪಾಯಿಂಟ್ಸ್ ಸಂಗ್ರಹಿಸಿದೆ. ಮೂರನೇ ಪಂದ್ಯ ಆಡಿದ ಪೈರೆಟ್ಸ್ ಮೊದಲ ಸಲ ಹಿನ್ನಡೆ ಕಂಡಿತು.
ವಾರಿಯರ್ಸ್ ಮುಂದಿನ ಪಂದ್ಯ ಪುಣೇರಿ ಪಲ್ಟನ್ ವಿರುದ್ಧ ಆಡಲಿದೆ. ಮಣಿಂದರ್ (15 ಪಾಯಿಂಟ್), ನಿತಿನ್ ಕುಮಾರ್ (14 ಪಾಯಿಂಟ್ಸ್), ಶ್ರೀಕಾಂತ್ ಜಾಧವ್ (12) ಅವರು ಬಹುಪಾಲು ಪಾಯಿಂಟ್ಸ್ ಗಳಿಸಿದರು. ಪಟ್ನಾ ಪೈರೇಟ್ಸ್ ಪರ ಪ್ರಮುಖ ರೈಡರ್ ಸಚಿನ್ (14 ಮತ್ತು ಸುಧಾಕರ್ (14) ಉತ್ತಮ ರೈಡಿಂಗ್ ಪ್ರದರ್ಶಿಸಿದರು.
ಆರಂಭದಲ್ಲಿ ಮಣಿಂದರ್ ಅವರನ್ನು ಕ್ಯಾಚ್ ಮಾಡಿದ ಪೈರೆಟ್ಸ್, ನಂತರ ಸಚಿನ್ ರೈಡಿಂಗ್ನಿಂದ ಮುನ್ನಡೆ ಗಳಿಸಿತ್ತು. ಆದರೆ ನಿತಿನ್ ಅವರು ಒಂದೇ ರೈಡ್ನಲ್ಲಿ ಐದು ಪಾಯಿಂಟ್ಸ್ ಪಡೆದಿದ್ದು ಪರಿಸ್ಥಿತಿಯನ್ನು ಬದಲಾಯಿಸಿತು. 10–10ರಲ್ಲಿ ಸಮ ಮಾಡಿಕೊಂಡ ನಂತರ ಪಂದ್ಯದುದ್ದಕ್ಕೂ ವಾರಿಯರ್ಸ್ ಮುನ್ನಡೆ ಕಾಪಾಡಿಕೊಂಡಿತು.
ಇಂದಿನ ಪಂದ್ಯಗಳು:
ತಮಿಳ್ ತಲೈವಾಸ್– ತೆಲುಗು ಟೈಟಾನ್ಸ್ (ರಾತ್ರಿ 8.00), ಬೆಂಗಳೂರು ಬುಲ್ಸ್– ಜೈಪುರ ಪಿಂಕ್ಪ್ಯಾಂಥರ್ಸ್ (ರಾತ್ರಿ 9.00)