ನವದೆಹಲಿ: ಸೈನಾ ನೆಹ್ವಾಲ್, ಬಿ.ಸಾಯಿ ಪ್ರಣೀತ್, ಕಿದಂಬಿ ಶ್ರೀಕಾಂತ್ ಸೇರಿದಂತೆ ಭಾರತ ಬ್ಯಾಡ್ಮಿಂಟನ್ ತಂಡವು ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 1000 ಟೂರ್ನಿಗಳಲ್ಲಿ ಸ್ಪರ್ಧಿಸಲು ಭಾನುವಾರ ಥಾಯ್ಲೆಂಡ್ಗೆ ತೆರಳಿತು.
ಕಿಡಂಬಿ ಶ್ರೀಕಾಂತ್ ಅವರು ಕಳೆದ ಅಕ್ಟೋಬರ್ನಲ್ಲಿ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಆಡಿದ್ದರು. ಅವರನ್ನು ಹೊರತುಪಡಿಸಿ ಉಳಿದ ಆಟಗಾರರು ಸುಮಾರು 10 ತಿಂಗಳುಗಳ ಬಳಿಕ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಟೂರ್ನಿಗಳು ಸ್ಥಗಿತಗೊಂಡಿದ್ದವು.
ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು ಸದ್ಯ ಲಂಡನ್ನಲ್ಲಿದ್ದು, ಭಾನುವಾರ ಅಲ್ಲಿಂದಲೇ ದೋಹಾ ಮೂಲಕ ಬ್ಯಾಂಕಾಕ್ ತಲುಪಿದರು.
ಥಾಯ್ಲೆಂಡ್ನಲ್ಲಿ ಯೋನೆಕ್ಸ್ ಓಪನ್ (ಜನೆವರಿ 12–17) ಹಾಗೂ ಟೊಯೊಟಾ ಓಪನ್ (ಜನೆವರಿ 19–24) ಟೂರ್ನಿಗಳು ನಿಗದಿಯಾಗಿವೆ.
ಭಾರತ ತಂಡದಲ್ಲಿ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಕನ್ನಡತಿ ಅಶ್ವಿನಿ ಪೊನ್ನಪ್ಪ, ಎನ್ ಸಿಕ್ಕಿರೆಡ್ಡಿ, ಎಚ್.ಎಸ್. ಪ್ರಣಯ್, ಪರುಪಳ್ಳಿ ಕಶ್ಯಪ್, ಸಮೀರ್ ವರ್ಮಾ, ಧೃವ ಕಪಿಲಾ, ಮನು ಅತ್ರಿ ಇದ್ದಾರೆ.
ಹಿಂದೆ ಸರಿದ ಲಕ್ಷ್ಯ: ಯುವ ಆಟಗಾರ ಲಕ್ಷ್ಯ ಸೇನ್ ಬೆನ್ನುನೋವಿನ ಕಾರಣ ಥಾಯ್ಲೆಂಡ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಭ್ಯಾಸದ ಸಂದರ್ಭದಲ್ಲಿ ಅವರು ನೋವಿಗೆ ತುತ್ತಾಗಿದ್ದರು.