ನವದೆಹಲಿ: ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ತಮ್ಮ ತಲೆಗೆ ಆಗಿದ್ದ ಗಾಯಕ್ಕೆ ಸ್ಥಳದಲ್ಲಿದ್ದ ವೈದ್ಯರು ಪಟ್ಟಿಯನ್ನು ಬಿಗಿಯಾಗಿ ಕಟ್ಟಿದ್ದರಿಂದ ಏಕಾಗ್ರತೆಗೆ ಭಂಗವಾಯಿತು ಎಂದು ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಜರಂಗ್ ಈ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವ್ಲಾಡೆಸ್ ಟೊಬೀರ್ ವಿರುದ್ಧ ಸೆಣಸಿದ್ದರು. ಈ ಸಂದರ್ಭದಲ್ಲಿ ಬಜರಂಗ್ ತಲೆಗೆ ಗಾಯವಾಗಿ ರಕ್ತ ಸುರಿಯಿತು.
ಆಗ ಸ್ಥಳದಲ್ಲಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದರು. ರಿಜಿಡ್ ಟೇಪ್ ಕಟ್ಟಿದ್ದರು. ಟೆನಿಸ್ ಹಾಗೂ ಬ್ಯಾಸ್ಕೆಟ್ಬಾಲ್ ಆಟಗಾರರಿಗೆ ಗಾಯವಾದಾಗ ಈ ರೀತಿಯ ಟೇಪ್ ಬಳಸಲಾಗುತ್ತದೆ. ಅದರಲ್ಲೂ ಮೊಣಕಾಲು ಮತ್ತು ಪಾದಕ್ಕೆ ಗಾಯವಾದಾಗ ಬಳಸುತ್ತಾರೆನ್ನಲಾಗಿದೆ.
‘ಅವರು ಈ ರೀತಿಯಾಗಿ ಯಾಕೆ ಮಾಡಿದರೋ ದೇವರಿಗೇ ಗೊತ್ತು. ಆದರೆ ಅದರಿಂದಾಗಿ ಗಾಯದ ಜಾಗದಲ್ಲಿ ವಿಪರೀತ ಉರಿತ ಉಂಟಾಯಿತು. ಅದರಿಂದಾಗಿ ಆ ಜಾಗದಲ್ಲಿದ್ದ ಕೂದಲುಗಳನ್ನು ಕತ್ತರಿಸಬೇಕಾಯಿತು. ಇದರಿಂದಾಗಿ ಸುಮಾರು 20 ನಿಮಿಷಗಳು ವ್ಯರ್ಥವಾದವು’ ಎಂದು ಬಜರಂಗ್ ಹೇಳಿದರು.