ಜಮಖಂಡಿ (ಬಾಗಲಕೋಟೆ ಜಿಲ್ಲೆ): ಕರ್ನಾಟಕದ ಸಂಜು ಮಾನೆ ಹಾಗೂ ಮಲ್ಲಪ್ಪ ಯಲ್ಲಟ್ಟಿ ಇಲ್ಲಿನ ಐತಿಹಾಸಿಕ ಪೋಲೊ ಮೈದಾನದ ತಾಲ್ಲೂಕು ಕ್ರೀಡಾಂಗಣದ ಅಖಾಡಾದಲ್ಲಿ ನಡೆಯುತ್ತಿರುವ ಕನ್ನಡ ಸಂಘ ಆಶ್ರಯದ ರಾಷ್ಟ್ರಮಟ್ಟದ ಕುಸ್ತಿಯ ವಿವಿಧ ವಿಭಾಗಗಳಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದರು.
ಭಾರತ ಮಲ್ಲ ಸಾಮ್ರಾಟ ಪ್ರಶಸ್ತಿಗಾಗಿ ನಡೆಯುತ್ತಿರುವ 74 ಕೆಜಿ ವಿಭಾಗದಲ್ಲಿ ಸಂಜು ಮಾನೆ ಹಾಗೂ ಮಲ್ಲಪ್ಪ ಯಲ್ಲಟ್ಟಿ ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು. ಕನ್ನಡ ಸಂಘ ಕೇಸರಿ ಪ್ರಶಸ್ತಿಗಾಗಿ ನಡೆಯುತ್ತಿರುವ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬೆಳಗಾವಿಯ ಪಾಂಡು ಶಿಂಧೆ, ಬಾಗಲಕೋಟೆ ತಾಲ್ಲೂಕಿನ ಸಾವಳಗಿ ಗ್ರಾಮದ ಚಿಕ್ಕಯ್ಯ ಟಿ. ಅವರನ್ನು ಚಿತ್ ಮಾಡಿ ಗೆಲುವಿನ ನಗೆ ಬೀರಿದರು.
ಫಲಿತಾಂಶಗಳು: 74 ಕೆಜಿ ವಿಭಾಗ: ಭಾರತ ಮಲ್ಲ ಸಾಮ್ರಾಟ ಪ್ರಶಸ್ತಿಗಾಗಿರುವ ಸ್ಪರ್ಧೆಗಳಲ್ಲಿ ಸಂಜು ಮಾನೆ, ಮಲ್ಲಪ್ಪ ಯಲ್ಲಟ್ಟಿ, ಹರಿಯಾಣದ ಮನ್ದೀಪ ಡೋಲು, ಕುಲದೀಪ, ದೆಹಲಿಯ ಸೋನು ಕುಮಾರ, ಮನೀಷ್, ಉತ್ತರ ಪ್ರದೇಶದ ಮೋಹಿತ್, ಮಹಾರಾಷ್ಟ್ರದ ರಾಜೇಂದ್ರ ರಾಜಮಾನೆ ಕ್ವಾರ್ಟರ್ ಫೈನಲ್ಗೆ ಮುನ್ನಡೆದರು.
74 ಕೆಜಿ ವಿಭಾಗ: ಕನ್ನಡ ಸಂಘ ಕೇಸರಿ ಪ್ರಶಸ್ತಿಯ ಸ್ಪರ್ಧೆಗಳಲ್ಲಿ ಜಮಖಂಡಿ ತಾಲ್ಲೂಕಿನ ಸನಾಳ ಗ್ರಾಮದ ಶಾಂತಪ್ಪ ಜಿ, ಸಾವಳಗಿ ಗ್ರಾಮದ ಶ್ರೀಶೈಲ ಎ.ಬಿ, ಬೆಳಗಾವಿ ಡಿವೈಎಸ್ಎಸ್ನ ಪಾಂಡು ಶಿಂಧೆ, ಮುಧೋಳದ ಸಗರಪ್ಪ ಹನಗೋಜಿ ಮೊದಲ ಸುತ್ತಿನಲ್ಲಿ ಜಯ ಗಳಿಸಿದರು.