ನವದೆಹಲಿ: ಸ್ನೂಕರ್ ಮತ್ತು ಬಿಲಿಯರ್ಡ್ಸ್ನಲ್ಲಿ ಹಲವಾರು ಸಾಧನೆಗಳನ್ನು ಮಾಡಿರುವ ಕರ್ನಾಟಕದ ಪಂಕಜ್ ಅಡ್ವಾಣಿ ಅವರ ಹೆಸರನ್ನು ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ (ಬಿಎಸ್ಎಫ್ಐ) ಪದ್ಮಭೂಷಣ ಪ್ರಶಸ್ತಿಗೆ ಮತ್ತೆ ಶಿಫಾರಸು ಮಾಡಿದೆ.
15 ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಹೆಸರನ್ನು ಹೋದ ವರ್ಷವೂ ಬಿಎಸ್ಎಫ್ಐ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಆದರೆ ಆಗ ಸರ್ಕಾರ ಇದನ್ನು ಪರಿಗಣಿಸಿರಲಿಲ್ಲ.
‘ಸ್ನೂಕರ್ ಮತ್ತು ಬಿಲಿಯರ್ಡ್ಸ್ಗೆ ಪಂಕಜ್ ಅಡ್ವಾಣಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ವರ್ಷವೂ ಅವರ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ. ಈ ಸಲ ಸಿಗುವ ವಿಶ್ವಾಸವಿದೆ’ ಎಂದು ಬಿಎಸ್ಎಫ್ಐ ಕಾರ್ಯದರ್ಶಿ ಎಸ್. ಬಾಲಸುಬ್ರಮಣಿ ಯನ್ ತಿಳಿಸಿದ್ದಾರೆ. ಈ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ಎಂಟರ ಘಟ್ಟಕ್ಕೆ ಪಂಕಜ್
ಬ್ಯಾಂಕಾಕ್ (ಪಿಟಿಐ): ಪಂಕಜ್ ಅಡ್ವಾಣಿ ಅವರು ಇಲ್ಲಿ ನಡೆಯುತ್ತಿರುವ 6 ರೆಡ್ ವಿಶ್ವ ಸ್ನೂಕರ್ ಚಾಂಪಿಯನ್ ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ದ್ದಾರೆ. 15 ಬಾರಿಯ ವಿಶ್ವ ಚಾಂಪಿಯನ್ ಬೆಂಗಳೂರಿನ ಪಂಕಜ್ ಪ್ರೀ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಚೀನಾದ ಯುವಾನ್ ಸಿಜುನ್ ಎದುರು ಗೆಲುವು ಪಡೆದರು.