ಲಂಡನ್ (ಪಿಟಿಐ): `ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದವರು ಬಾಂಗ್ಲಾದೇಶದಂತೆ ಆಡಿದರು. ಇನ್ನು ಈ ಸರಣಿಯಲ್ಲಿ ಆತಿಥೇಯ ತಂಡವನ್ನು ನಿಯಂತ್ರಿಸಲು ದೋನಿ ಪಡೆಗೆ ಅಸಾಧ್ಯ~ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ ನುಡಿದಿದ್ದಾರೆ.
`ಭಾರತ ಮತ್ತೆ ಸುಧಾರಿಸಿಕೊಂಡು ತಿರುಗೇಟು ನೀಡುತ್ತದೆ ಎಂಬ ವಿಶ್ವಾಸ ನನಗಿಲ್ಲ. ಯಾರು ತಂಡದಲ್ಲಿ ಆಡುತ್ತಾರೆ ಎಂಬುದು ಇಲ್ಲಿ ಮುಖ್ಯವಲ್ಲ. ಶಾರ್ಟ್ ಪಿಚ್ ಎಸೆತಗಳನ್ನು ಆಡಲು ಪ್ರವಾಸಿ ಬ್ಯಾಟ್ಸ್ಮನ್ಗಳಿಗೆ ಸಾಧ್ಯವಾಗುತ್ತಿಲ್ಲ. ಭಾರತದ ಬೌಲರ್ಗಳು ವಿಫಲರಾಗುತ್ತಿದ್ದಾರೆ~ ಎಂದು ಬಾಯ್ಕಾಟ್ `ದಿ ಡೈಲಿ ಟೆಲಿಗ್ರಾಫ್~ ಪತ್ರಿಕೆಯ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.
`ಟ್ರೆಂಟ್ಬ್ರಿಜ್ ಕ್ರೀಡಾಂಗಣದಲ್ಲಿ ಭಾರತದವರು ಕೆಲವೊಮ್ಮೆ ಬಾಂಗ್ಲಾ ತಂಡದ ಆಟಗಾರರಂತೆ ಆಡಿದರು. 319 ರನ್ಗಳ ಸೋಲು ಅದಕ್ಕೊಂದು ಉದಾಹರಣೆ. ಈಗ ಇಂಗ್ಲೆಂಡ್ ಅಗ್ರಪಟ್ಟದ ಮೇಲೆ ಕಣ್ಣಿಟ್ಟಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ~ ಎಂದು ಅವರು ಹೇಳಿದ್ದಾರೆ.
`ಭಾರತದ ಫೀಲ್ಡಿಂಗ್ ಕೆಟ್ಟದಾಗಿತ್ತು. ಬೌಲಿಂಗ್ನಲ್ಲಿ ಒಂದಿಷ್ಟು ತಂತ್ರ ಇರಲಿಲ್ಲ. ಮೊದಲ ಇನಿಂಗ್ಸ್ನಲ್ಲಿ ರಾಹುಲ್ ದ್ರಾವಿಡ್ ಹಾಗೂ ಎರಡನೇ ಇನಿಂಗ್ಸ್ನಲ್ಲಿ ಸಚಿನ್ ತೆಂಡೂಲ್ಕರ್ ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಕ್ಲಿಕ್ ಆಗಲಿಲ್ಲ~ ಎಂದಿದ್ದಾರೆ.
ಆದರೆ ಇಂಗ್ಲೆಂಡ್ ನೀಡಿದ ಪ್ರದರ್ಶನ ಹಾಗೂ ಟ್ರೆಂಟ್ಬ್ರಿಜ್ ಪಿಚ್ ಬಗ್ಗೆ ಬಾಯ್ಕಾಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.