ನವದೆಹಲಿ (ಪಿಟಿಐ): ಭಾರತ ಹಾಕಿ ತಂಡದ ಡ್ರ್ಯಾಗ್ ಫ್ಲಿಕ್ಕರ್ ಸಂದೀಪ್ ಸಿಂಗ್ ಮತ್ತು ಮಿಡ್ಫೀಲ್ಡರ್ ಸರ್ದಾರ್ ಸಿಂಗ್ ತಮ್ಮ ಮೇಲಿನ ಎರಡು ವರ್ಷಗಳ ನಿಷೇಧ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
`ಇಬ್ಬರು ಆಟಗಾರರು ಇ-ಮೇಲ್ ಕಳುಹಿಸಿದ್ದು, ನಿಷೇಧ ಶಿಕ್ಷೆ ತೆರವುಗೊಳಿಸುವಂತೆ ಕೋರಿದ್ದಾರೆ. ಮಾತ್ರವಲ್ಲ ಈ ಕುರಿತು ಮಾತುಕತೆಗೆ ಸಿದ್ಧ ಎಂದಿದ್ದಾರೆ. ಮುಂದಿನ ಮಂಗಳವಾರದ ಬಳಿಕ ಯಾವುದೇ ದಿನ ಅವರ ಜೊತೆ ಮಾತುಕತೆಗೆ ನಾನು ಸಿದ್ಧ~ ಎಂದು ಹಾಕಿ ಇಂಡಿಯಾ (ಎಚ್ಐ) ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ಗುರುವಾರ ನುಡಿದರು.
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ತಂಡದ ಆಟಗಾರರ ತರಬೇತಿ ಶಿಬಿರವನ್ನು ಅರ್ಧದಲ್ಲೇ ತ್ಯಜಿಸಿ ಅಶಿಸ್ತು ತೋರಿದ್ದಕ್ಕೆ ಇಬ್ಬರ ಮೇಲೂ ಹಾಕಿ ಇಂಡಿಯಾ ಕ್ರಮ ಕೈಗೊಂಡಿತ್ತು. ಆದರೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು.