ಬೆಂಗಳೂರು: ಚಿಂದಿ ಆಯುವುದು, ಶೌಚಾಲಯ, ಮ್ಯಾನ್ಹೋಲ್, ಒಳಚರಂಡಿ ಸ್ವಚ್ಛತೆಯಲ್ಲಿ ದಿನವಿಡೀ ತೊಡಗುವ ಕೆಲಸಗಾರರಿಗಾಗಿ ಜಲಮಂಡಳಿಯಿಂದ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ 12 ವಿಶ್ರಾಂತಿ ಗೃಹಗಳನ್ನು ತಲಾ ₹ 10 ಲಕ್ಷ ವೆಚ್ಚದಲ್ಲಿ ಕಟ್ಟಲಾಗಿದೆ. ದಿನವಿಡೀ ಕೆಲಸ ಮಾಡುವ ನೌಕರರು ಎಲ್ಲೆಂದರಲ್ಲಿ ಶೌಚಾಲಯವನ್ನು ಹುಡುಕುವುದು ತಪ್ಪಿದೆ. ಅಲ್ಲದೇ ಸಮಯ ಸಿಕ್ಕಾಗ ಒಂದಿಷ್ಟು ಹೊತ್ತು ಅವರು ವಿಶ್ರಾಂತಿಯನ್ನೂ ಪಡೆಯಬಹುದಾಗಿದೆ.
ಈ ಕಟ್ಟಡಗಳು ಆಧುನಿಕ ಸೌಲಭ್ಯವನ್ನು ಹೊಂದಿವೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಬಿಸಿ ನೀರು ಕೂಡ ಇಲ್ಲಿ ಲಭ್ಯವಿದೆ. ಇಲ್ಲಿ ಅವರು ವಿಶ್ರಾಂತಿ ಪಡೆಯುವಷ್ಟು ಜಾಗ ಇದೆ. ಸೋಂಕು ಹರಡದಂತೆ ಸ್ವಚ್ಛತೆಯನ್ನೂ ಇಲ್ಲಿ ಕಾಪಾಡಿಕೊಳ್ಳುವ ಸೌಲಭ್ಯ ನೀಡಿದೆ.
ನಗರದ ಸೌಂದರ್ಯ ಹೆಚ್ಚಿಸುವ ಭರದಲ್ಲಿ ತಮ್ಮ ಆರೋಗ್ಯದ ಕಾಳಜಿ ಮಾಡದ ನೂರಾರು ಕೆಲಸಗಾರರ ಆರೈಕೆಯನ್ನು ಈ ಕೇಂದ್ರಗಳು ಮಾಡಲಿವೆ.
‘ಕಸ ಹಾಗೂ ಕೊಳಚೆಯಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಸಮಸ್ಯೆ ಎದುರಿಸಬೇಕಿದೆ. ವಿಶ್ರಾಂತಿ ಗೃಹ ಆದರೆ ಸಮಯ ಸಿಕ್ಕಾಗ ಮುಖ, ಕೈ ತೊಳೆಯಬಹುದು. ಬಿಸಿನೀರು ಕುಡಿಯಬಹುದು’ ಎಂದು ಪೀಣ್ಯದ ಕಸ ಆಯುವ ವ್ಯಕ್ತಿ ಅಭಿಪ್ರಾಯಪಟ್ಟರು.
‘ಹಲವು ವರ್ಷಗಳ ಹಿಂದೆಯೇ ಜಲಮಂಡಳಿಗೆ ಮನವಿ ಮಾಡಿಕೊಂಡಿದ್ದೆವು. ಕೆಲಸ ಮುಗಿದ ಬಳಿಕ ಅವರಿಗೆ ಸ್ವಚ್ಛವಾಗಲು ಜಾಗ ಬೇಕಿತ್ತು. ಈಗ ಅದು ಸಾಕಾರಗೊಂಡಿದೆ. ಎಲ್ಲಾ 198 ವಾರ್ಡ್ಗಳಲ್ಲೂ ಈ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ನೌಕರರ ಸಂಘದ ಅಧ್ಯಕ್ಷ ಗನಗಾದ್ರಿ ಹೇಳಿದರು.