ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಅಭಿಜಿತ್‌ಗೆ ನೊಬೆಲ್‌

ಅರ್ಥಶಾಸ್ತ್ರಕ್ಕೆ ನೀಡಿದ ಪ್ರಶಸ್ತಿ ಹಂಚಿಕೊಂಡ ಎಸ್ತರ್‌ ಡಫ್ಲೊ, ಮೈಕಲ್‌ ಕ್ರೆಮರ್‌
Last Updated 14 ಅಕ್ಟೋಬರ್ 2019, 20:29 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ಭಾರತದಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕ ಪ್ರಜೆಯಾಗಿರುವ ಅಭಿಜಿತ್‌ ಬ್ಯಾನರ್ಜಿ (58), ಅವರ ಹೆಂಡತಿ ಎಸ್ತರ್‌ ಡಫ್ಲೊ (46) ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಇವರು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಪ್ರಶಸ್ತಿಯ ಗೌರವ ಸಂದಿದೆ.

ಬ್ಯಾನರ್ಜಿ ಮತ್ತು ಡಫ್ಲೊ ಅವರಿಬ್ಬರೂ ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರಾಧ್ಯಾಪಕರು.

ಡಫ್ಲೊ ಅವರು ಅರ್ಥಶಾಸ್ತ್ರದಲ್ಲಿ ಈ ಪ್ರಶಸ್ತಿ ಪಡೆದ ಎರಡನೇ ಮಹಿಳೆ. ಅಷ್ಟೇ ಅಲ್ಲ, ಈ‍ಕ್ಷೇತ್ರದಲ್ಲಿ ಈ ಪ‍್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ.

ಕೋಲ್ಕತ್ತದಲ್ಲಿ ಜನಿಸಿದ ಅಭಿಜಿತ್‌ ಅವರು ಅಲ್ಲಿನ ವಿಶ್ವವಿದ್ಯಾಲಯ ಅಲ್ಲದೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. 1998ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

2003ರಲ್ಲಿ ಅಭಿಜಿತ್‌ ಅವರು ಎಸ್ತರ್‌ ಡಫ್ಲೊ ಮತ್ತು ಸೆಂಥಿಲ್‌ ಮುಲೈನಾಥನ್‌ ಅವರೊಂದಿಗೆ ಸೇರಿ ದಿ ಅಬ್ದುಲ್‌ ಲತೀಫ್‌ ಜಮೀಲ್‌ ಪಾವರ್ಟಿ ಆ್ಯಕ್ಷನ್‌ ಲ್ಯಾಬ್‌ ಸ್ಥಾಪಿಸಿದ್ದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ಉನ್ನತ ಮಟ್ಟದ ಸಮಿತಿಯಲ್ಲೂ ಅಭಿಜಿತ್‌ ಕಾರ್ಯನಿರ್ವಹಿಸಿದ್ದರು. ಪ್ರಶಸ್ತಿಯು 90 ಲಕ್ಷ ಕ್ರೊನಾರ್‌ (ಸುಮಾರು ₹6.5 ಕೋಟಿ) ನಗದನ್ನು ಒಳಗೊಂಡಿದೆ.

ಬಡತನ ನಿರ್ಮೂಲನೆಯ ಕೆಲಸ
‘ಜಾಗತಿಕ ಮಟ್ಟದಲ್ಲಿ ಬಡತನದ ನಿರ್ಮೂಲನೆಯ ನಮ್ಮ ಸಾಮರ್ಥ್ಯವನ್ನು ಈ ವರ್ಷ ಪ್ರಶಸ್ತಿ ಪಡೆದವರ ಸಂಶೋಧನೆಯು ಗಣನೀಯವಾಗಿ ಹೆಚ್ಚಿಸಿದೆ. ಅವರ ಪ್ರಯೋಗ ಆಧಾರಿತ ಧೋರಣೆಯು ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಎರಡೇ ದಶಕಗಳಲ್ಲಿ ದೊಡ್ಡ ಪರಿವರ್ತನೆ ಉಂಟು ಮಾಡಿದೆ. ಅಭಿವೃದ್ಧಿ ಅರ್ಥಶಾಸ್ತ್ರವು ಈಗ ಹುಲುಸಾಗಿ ಬೆಳೆಯುತ್ತಿರುವ ಸಂಶೋಧನಾ ವಿಭಾಗವಾಗಿದೆ’ ಎಂದು ಪ್ರಶಸ್ತಿ ಘೋಷಿಸಿದ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್ ಸೈನ್ಸಸ್‌ ಹೇಳಿದೆ.

ಈ ಮೂವರು ಪರಿಚಯಿಸಿದ ಹೊಸ ಧೋರಣೆಯು ಬಡತನ ನಿರ್ಮೂಲನೆಗೆ ವಿಶ್ವಾಸಾರ್ಹ ಉತ್ತರಗಳನ್ನು ಕೊಡುತ್ತದೆ ಎಂದೂ ತಿಳಿಸಿದೆ.

ಇವರ ಒಂದು ಪ್ರಯೋಗದಿಂದಾಗಿ ಭಾರತದ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮಕ್ಕಳಿಗೆ ಪರಿಹಾರ ಬೋಧನೆಯ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಅನಾರೋಗ್ಯ ತಡೆಗಾಗಿ ಭಾರಿ ಸಹಾಯಧನಗಳ ಯೋಜನೆಯು ಹಲವು ದೇಶಗಳಲ್ಲಿ ಜಾರಿಯಾಗಿದೆ. ಇದು ಇನ್ನೊಂದು ಉದಾಹರಣೆ ಎಂದು ಅಕಾಡೆಮಿ ಹೇಳಿದೆ.

*
ಇದೊಂದು ಅದ್ಭುತ ಅನುಭವ. ಜೀವನದಲ್ಲಿ ಇಂತಹ ಅದೃಷ್ಟದಾಯಕ ಕ್ಷಣಗಳು ಬಹಳ ಬಾರಿ ಬರುವುದಿಲ್ಲ.
-ಅಭಿಜಿತ್‌ ಬ್ಯಾನರ್ಜಿ, ಅರ್ಥಶಾಸ್ತ್ರಜ್ಞ

*
ಯಶಸ್ಸನ್ನು ಪಡೆದುಕೊಳ್ಳಲು ಮಹಿಳೆಗೆ ಸಾಧ್ಯ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಇದು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಬಲ್ಲದು ಎಂಬ ವಿಶ್ವಾಸವಿದೆ.
-ಎಸ್ತರ್‌ ಡಫ್ಲೊ, ಅರ್ಥಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT