ನವದೆಹಲಿ: ‘ಕಾನೂನು ದುರುಪಯೋಗಪಡಿಸಿಕೊಳ್ಳುವ ಪತ್ನಿಯರಿಂದ ಶೋಷಣೆ ಅನುಭವಿಸುತ್ತಿರುವ’ ಪುರುಷರ ದೂರುಗಳನ್ನು ಪರಿಶೀಲಿಸಲು ಆಯೋಗ ರಚಿಸಬೇಕು ಎಂದು ಬಿಜೆಪಿಯ ಇಬ್ಬರು ಸಂಸದರು ಬೇಡಿಕೆ ಇರಿಸಿದ್ದಾರೆ.
‘ಪುರುಷ ಆಯೋಗ’ಕ್ಕೆ ಬೆಂಬಲ ಕೋರಿ ಇದೇ 23ರಂದು ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಲಿದ್ದೇವೆ ಎಂದು ಘೋಸಿ ಕ್ಷೇತ್ರದ ಲೋಕಸಭಾ ಸದಸ್ಯಹರಿನಾರಾಯಣ ರಾಜ್ಭರ್ ಹಾಗೂ ಹರ್ದೊಯಿ ಕ್ಷೇತ್ರದ ಸಂಸದ ಅನ್ಶುಲ್ ವರ್ಮಾ ತಿಳಿಸಿದ್ದಾರೆ.
‘ಸಂಸತ್ತಿನಲ್ಲಿ ಸಹ ಆಯೋಗದ ವಿಷಯ ಪ್ರಸ್ತಾಪಿಸಿದ್ದೇವೆ. ಪತ್ನಿಯರಿಂದ ಪುರುಷರುಶೋಷಣೆ ಅನುಭವಿಸುವ ಉದಾಹರಣೆಗಳಿವೆ. ನ್ಯಾಯಾಲಯದಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ಇನ್ನೂ ಬಾಕಿ ಇವೆ.ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಕಾನೂನು ಹಾಗೂ ಸಾಕಷ್ಟು ವೇದಿಕೆಗಳು ಇವೆ. ಆದರೆ ಇದೇ ರೀತಿ ಪುರುಷರಿಗೆ ನ್ಯಾಯ ಒದಗಿಸಿಕೊಡುವ ವೇದಿಕೆ ಇಲ್ಲ’ ಎಂದು ರಾಜ್ಭರ್ ಹೇಳಿದ್ದಾರೆ.
* ಕೆಲವರು ಪುರುಷ ಆಯೋಗಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರಿಗೆ ಹಾಗೆ ಕೇಳುವ ಹಕ್ಕಿದೆ. ಆದರೆ, ಅಂತಹ ಆಯೋಗದ ಅಗತ್ಯವಿದೆ ಎಂದು ನನಗನಿಸುವುದಿಲ್ಲ. -ರೇಖಾ ಶರ್ಮಾ, ಅಧ್ಯಕ್ಷೆ, ರಾಷ್ಟ್ರೀಯ ಮಹಿಳಾ ಆಯೋಗ