ಭೋಪಾಲ್ : ‘ಚೌಕೀದಾರ್ ಚೋರ್ ಹೈ’ ಪದ ಬಳಸಿಕೊಂಡು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ನಡೆಸುತ್ತಿದ್ದ ಪ್ರಚಾರಕ್ಕೆ ಚುನಾವಣಾ ಆಯೋಗ ಗುರುವಾರ ನಿರ್ಬಂಧ ಹೇರಿದೆ.‘ಚೌಕೀದಾರ್ ಚೋರ್ ಹೈ’ ಎಂಬ ವಾಕ್ಯವಿರುವ ಆಡಿಯೊ, ವಿಡಿಯೊ ಬಳಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರಚಾರದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದ ಕಾರಣ, ನಿರ್ಧಾರ ಪರಾಮರ್ಶಿಸುವಂತೆ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಪ್ರಧಾನಿ ಮೋದಿ ಕುರಿತು ಹೇಳಲಾಗುವ ‘ಚೌಕೀದಾರ್’ ಪದವನ್ನು ಆಕ್ಷೇಪಾರ್ಹ ರೀತಿಯಲ್ಲಿ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಬಿಜೆಪಿ ದೂರು ನೀಡಿತ್ತು. ರಫೇಲ್ ಹಗರಣದ ಬಳಿಕ ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಕುರಿತು ‘ಚೌಕೀದಾರ್ ಚೋರ್ ಹೈ’ ಎಂದು ಪದೇ ಪದೇ ಹೇಳುತ್ತಿದ್ದರು.
ರಫೇಲ್ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಕಳೆದ ವಾರ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.