ಬೀದರ್: ‘ಕನ್ನಡ ಸಾಹಿತ್ಯ ಪರಿಷತ್ತಿನ 103ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜಿಲ್ಲೆಯ 103 ಗ್ರಾಮಗಳಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕರ್ನಾಟಕ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪರಿಷತ್ತಿನ 103ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಒಂದು ಜನಾಂಗದ ಅಳಿವು ಅವರ ಭಾಷೆಯ ವಿನಾಶವನ್ನು ಅವಲಂಬಿಸಿರುತ್ತದೆ. ಕೇವಲ ಭಾಷಣಗಳಿಂದ ಕನ್ನಡದ ಉಳಿವು ಸಾಧ್ಯವಿಲ್ಲ. ಕನ್ನಡವನ್ನು ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಬಳಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿ, ‘ಕನ್ನಡ ವಿಶ್ವದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ನಮ್ಮ ಹಿರಿಯರು ಶ್ರೀಮಂತಗೊಳಿಸಿರುವ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಆಗಬೇಕಿದೆ’ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ. ರಾಮಚಂದ್ರ ಗಣಾಪುರ ಮಾತನಾಡಿ, ‘ಕನ್ನಡ ಸಮುದ್ರದಾಚೆಗೂ ಬೆಳೆದು ಜಾಗತಿಕ ಮನ್ನಣೆ ಪಡೆಯಲು ಮುಂದಾಗಿದೆ. ಕನ್ನಡದ ಮೂಲ ಆಕರಗಳಾದ ಶಾಸನ, ಹಸ್ತಪ್ರತಿ, ತಾಡೋಲೆಗಳ ಸಂರಕ್ಷಣೆ ಹಾಗೂ ದಾಖಲೀಕರಣದ ಉದ್ದೇಶದಿಂದ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ದೀರ್ಘ ಪರಂಪರೆಯನ್ನು ಹೊಂದಿದೆ’ ಎಂದು ತಿಳಿಸಿದರು.
‘ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು, ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಸೇರಿದಂತೆ ಅನೇಕರು ಪರಿಷತ್ತಿನ ಏಳಿಗೆಗೆ ಶ್ರಮಿಸಿದ್ದಾರೆ. ಸುಮಾರು 3 ಲಕ್ಷ ಸದಸ್ಯರನ್ನು ಒಳಗೊಂಡ ಪರಿಷತ್ತು 2 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ’ ಎಂದು ಆವರು ಹೇಳಿದರು.
ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ರಾಜಶೇಖರ ಅಲ್ಮಾಜೆ, ಎಂ.ಎಸ್. ಮುದ್ದಣ್ಣ ಡಿ.ಎಡ್ ಪ್ರಾಚಾರ್ಯೆ ವಿದ್ಯಾವತಿ ಬಲ್ಲೂರ, ದೇವೇಂದ್ರ ಕರಂಜೆ ಇದ್ದರು. ಕೋಶಾಧ್ಯಕ್ಷ ಟಿ.ಎಂ. ಮಚ್ಚೆ ಸ್ವಾಗತಿಸಿದರು.
ಉಪನ್ಯಾಸಕ ಪ್ರೊ. ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಘುಡುಖಾನ್ ವಂದಿಸಿದರು.
**
ಜಿಲ್ಲೆಯಲ್ಲಿ ಕನ್ನಡಮಯ ವಾತಾವರಣ ನಿರ್ಮಿಸಲು ಪರಿಷತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾಮಾಜಿಕ ಕಾರ್ಯಗಳಿಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ
- ಸುರೇಶ ಚನಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.