ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದೆ. ಚಂಡಮಾರುತವಾಗಿ ಪರಿವರ್ತನೆಯಾಗುವ ಮೊದಲೇ ಇದು ಒಡಿಶಾ–ಆಂಧ್ರಪ್ರದೇಶ ಕರಾವಳಿಯತ್ತ ಸಾಗಿದೆ.
ಒಡಿಶಾದ ಗೋಪಾಲಪುರದಿಂದ ಆಗ್ನೇಯಕ್ಕೆ 560 ಕಿ.ಮೀ. ದೂರದಲ್ಲಿ ವಾಯುಭಾರ ಕುಸಿತ ನೆಲೆಯಾಗಿದ್ದು ಭಾರಿ ಚಂಡಮಾರುತದ ಭೀತಿ ಎದುರಾಗಿದೆ.
‘ಇದು ಪಶ್ಚಿಮದತ್ತ ಸಾಗಿ ಬಳಿಕ ಉತ್ತರದ ಕಡೆಗೆ ತಿರುಗಿಕೊಳ್ಳುವ ಸಾಧ್ಯತೆ ಇದೆ. ಗುರುವಾರದ ಹೊತ್ತಿಗೆ ಆಂಧ್ರ ಪ್ರದೇಶ ಕರಾವಳಿಯ ಕಳಿಂಗಪಟ್ಟಣ ತಲುಪಬಹುದು’ ಎಂದು ಭುವನೇಶ್ವರ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್. ಬಿಸ್ವಾಸ್ ತಿಳಿಸಿದ್ದಾರೆ.
ಬಳಿಕ ಇದು ದಿಕ್ಕು ಬದಲಿಸಿ ಒಡಿಶಾ ಮೂಲಕ ಪಶ್ಚಿಮ ಬಂಗಾಳದತ್ತ ಹೋಗಲಿದೆ. ಅಷ್ಟು ಹೊತ್ತಿಗೆ ಇದು ದುರ್ಬಲಗೊಂಡಿರುತ್ತದೆ. ಮಂಗಳವಾರದಿಂದ ಗುರುವಾರದವರೆಗೆ ಒಡಿಶಾದ ವಿವಿಧ ಸ್ಥಗಳಲ್ಲಿ ಭಾರಿ ಮಳೆ ಸುರಿಯಬಹುದು ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ಗರಿಷ್ಠ ನೂರು ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವೆಡೆ ಪ್ರವಾಹ ಉಂಟಾಗಬಹುದು. ಸಮುದ್ರದಲ್ಲಿ ಅರ್ಧ ಮೀಟರ್ನಷ್ಟು ಎತ್ತರದ ಅಲೆಗಳು ಸೃಷ್ಟಿಯಾಗಬಹುದು. ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಕೂಡ ಮಳೆ ಸುರಿಯಬಹುದು ಎಂದು ಅವರು ಹೇಳಿದ್ದಾರೆ.