ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್. ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಸಿಬಿಐಗೆ ಅನುಮತಿ ನೀಡಿದ್ದಾರೆ. ಎಂಬಿಬಿಎಸ್ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶುಕ್ಲಾ ಅವರು ಲಂಚ ಪಡೆದು ಖಾಸಗಿ ವೈದ್ಯಕೀಯ ಕಾಲೇಜಿನ ಪರವಾಗಿದ್ದರು ಎಂಬ ಆರೋಪ ಅವರ ಮೇಲಿದೆ.
ಪ್ರಾಥಮಿಕ ತನಿಖೆಯ ಮಾಹಿತಿಯನ್ನು ಒಳಗೊಂಡ ಟಿಪ್ಪಣಿಯನ್ನು ಮುಖ್ಯನ್ಯಾಯಮೂರ್ತಿ ಅವರಿಗೆ ಸಲ್ಲಿಸಿದ್ದ ಸಿಬಿಐ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅನುಮತಿ ನೀಡುವಂತೆ ಕೇಳಿಕೊಂಡಿತ್ತು.
‘ಶುಕ್ಲಾ ಅವರ ದುರ್ನಡತೆ ಆರೋಪದ ಬಗ್ಗೆ ಮಾಹಿತಿ ಬಂದ ಬಳಿಕ ಅಂದಿನ ಸಿಜೆಐ ದೀಪಕ್ ಮಿಶ್ರಾ ಅವರ ಸಲಹೆ ಮೇರೆಗೆ ಪ್ರಾಥಮಿಕ ತನಿಖೆ ನಡೆಸಲಾಗಿದೆ’ ಎಂದು ಗೊಯೊಯಿ ಅವರಿಗೆ ಬರೆದ ಪತ್ರದಲ್ಲಿ ಸಿಬಿಐ ತಿಳಿಸಿತ್ತು.
ಸಿಬಿಐ ನೀಡಿದ ಟಿಪ್ಪಣಿ ಹಾಗೂ ದಾಖಲೆಗಳನ್ನು ಪರಿಗಣಿಸಿದ ಸಿಜೆಐ ಗೊಗೊಯಿ ಅವರು ‘ಸಿಬಿಐ ಸಲ್ಲಿಸಿದ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಂಡು, ಪ್ರಕರಣ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
‘ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ನೀಡಿದ್ದು ಇದೇ ಮೊದಲು’ ಎಂದು ಸುಪ್ರೀಂ ಕೋರ್ಟ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ಲಾ ಅವರ ನ್ಯಾಯಾಂಗ ಅಧಿಕಾರಗಳನ್ನು ಸುಪ್ರೀಂ ಕೋರ್ಟ್ ಹಿಂಪಡೆದಿತ್ತು. ಸಿಜೆಐ ಅನುಮತಿ ನೀಡದ ಹೊರತು ಹಾಲಿ ನ್ಯಾಯಮೂರ್ತಿಯ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸುವಂತಿಲ್ಲ ಎಂದು1991ರ ಕೆ. ವೀರಸ್ವಾಮಿ ಪ್ರಕರಣ ಹೇಳುತ್ತದೆ.